ADVERTISEMENT

ಕನಕದಾಸರ ತತ್ವದ ಪಾಲನೆಯಾಗಲಿ

ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಚಿಂತನಗೋಷ್ಠಿ: ಶಾಸಕ ರಾಜಶೇಖರ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 7:29 IST
Last Updated 11 ಡಿಸೆಂಬರ್ 2017, 7:29 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ದಾಸಶ್ರೇಷ್ಠ ಕನಕದಾಸ ಸಾಹಿತ್ಯ ಚಿಂತನ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಗವಿಸಿದ್ದಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜಶೇಖರ ಪಾಟೀಲ, ತುಕಾರಾಮ ಮಲ್ಲಪ್ಪ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ದಾಸಶ್ರೇಷ್ಠ ಕನಕದಾಸ ಸಾಹಿತ್ಯ ಚಿಂತನ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಗವಿಸಿದ್ದಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜಶೇಖರ ಪಾಟೀಲ, ತುಕಾರಾಮ ಮಲ್ಲಪ್ಪ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ದಾಸಶ್ರೇಷ್ಠ ಕನಕದಾಸರ ತತ್ವವನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಸಾಧ್ಯ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿ ಶಾರದಾ ಶಿಕ್ಷಣ ಸಂಸ್ಥೆಯಿಂದ ಸಂಸ್ಥೆ ಅಧ್ಯಕ್ಷ ತುಕಾರಾಮ ಮಲ್ಲಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದುಳಿದ ಸಮಾಜದವರು ಶಿಕ್ಷಣ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ, ‘ಕನಕದಾಸರು ತಳ ಸಮುದಾಯದವರ ಉದ್ಧಾರಕ್ಕಾಗಿ ಪ್ರಯತ್ನಿಸಿದ್ದರು. ತಮ್ಮ ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ, ಭ್ರಷ್ಟಾಚಾರವನ್ನು ಖಂಡಿಸಿದ್ದಾರೆ’ ಎಂದರು.

ಸಾರ್ವಜನಿಕ ಗ್ರಂಥಾಲಯ ಪುಸ್ತಕ ಖರೀದಿ ಇಲಾಖೆಯ ನಿರ್ದೇಶಕಿ ಡಾ.ಜಯದೇವಿ ಗಾಯಕವಾಡ ಮಾತನಾಡಿ, ‘ಕನಕದಾಸರು ತಂಬೂರಿ ಹಿಡಿದು ಮನೆ ಮನೆ ಓಡಾಡಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದರು. ಬರಿ ಕೀರ್ತನೆ ಹಾಡಲಿಲ್ಲ. ಸಾಹಿತ್ಯ ರಚಿಸಿದರು. ಮೂಢನಂಬಿಕೆಯನ್ನು ವಿರೋಧಿಸಿದರು. ಅವರ ರಾಮಧಾನ್ಯ ಚರಿತೆಯಲ್ಲಿ ರಾಗಿ ಬಡವರ ಪ್ರತೀಕವಾದರೆ ಅಕ್ಕಿ ಶ್ರೀಮಂತರನ್ನು ಪ್ರತಿನಿಧಿಸುತ್ತದೆ. ಈ ಮೂಲಕ ಅವರು ವರ್ಗಭೇದವನ್ನು ಖಂಡಿಸಿದ್ದಾರೆ’ ಎಂದರು.

ಉಪನ್ಯಾಸಕ ಡಾ.ಬಲರಾಂ ಹುಡೆ, ಗೊಂಡ ಕುರುಬ ಸಮಾಜದ ಹಿರಿಯ ಮುಖಂಡ ಚಂದ್ರಕಾಂತ ಮೇತ್ರೆ ಮಾತನಾಡಿದರು.

ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಕನಕ ಯುವ ಪ್ರಶಸ್ತಿ ಪಡೆದಿರುವ ಡಾ.ಗವಿಸಿದ್ದಪ್ಪ ಪಾಟೀಲ ಹಾಗೂ ತುಕಾರಾಮ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಗೌರ ಬೀರಪ್ಪ ಮುತ್ತ್ಯಾ, ಮಲ್ಲಿಕಾರ್ಜುನ ಪೂಜಾರಿ, ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ನಿರ್ದೇಶಕ ಅರ್ಜುನ ಕನಕ, ಶಿವರಾಜ ನರಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿರ್ಮಲಾ ಮಾನಿಗೋಪಾಳೆ, ರಾಜಶೇಖರ ಮೇತ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಯಲ್ಲಮ್ಮ ತುಕಾರಾಮ, ಜಬ್ಬಾರಸಾಬ್ ಗೋಬರೆ, ವಿಕ್ರಮ ಪಾಟೀಲ, ಧನರಾಜ ದೊಡ್ಮನಿ, ನಗರಸಭೆ ಅಧ್ಯಕ್ಷ ಅಜರ ಅಲಿ ನವರಂಗ, ವೀರಣ್ಣ ಪಾಟೀಲ ಉಪಸ್ಥಿತರಿದ್ದರು. ಕಿಣ್ಣಿವಾಡಿ ಜೈಹನುಮಾನ ಕಲಾತಂಡದಿಂದ ಜನಪದ ಗೀತೆ ಹಾಡಲಾಯಿತು. ವಿವಿಧ ಗ್ರಾಮಗಳ ತಂಡಗಳಿಂದ ಡೊಳ್ಳು ಕುಣಿತ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.