ADVERTISEMENT

ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 6:32 IST
Last Updated 21 ಸೆಪ್ಟೆಂಬರ್ 2013, 6:32 IST

ಬೀದರ್: ಸಮಾನ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಶುಕ್ರವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದವು.

ನಗರದ ಗಣೇಶ ಮೈದಾನದಿಂದ ಜನರಲ್ ಕಾರ್ಯಪ್ಪ ವೃತ್ತ, ಅಂಬೇ­ಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್್್ಯಾಲಿ  ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಗುತ್ತಿಗೆ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ ಒದಗಿಸುವ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ವಿವಿಧ ಯೋಜನೆ­ಗಳನ್ನು ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾ­ರ ಆಯವ್ಯಯದಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಮುಖ್ಯ­ಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.

ಅಸಂಘಟಿತ ಕಾರ್ಮಿಕರ ಸಾಮಾ­ಜಿಕ ಭದ್ರತಾ ಮಂಡಳಿಗೆ ಬಿಡಿಗಾಸು ಅನುದಾನ ಕಲ್ಪಿಸಿಲ್ಲ. ಅಸಂಘಟಿತ ಕಾರ್ಮಿ­ಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಲಾಭ ಸಿಗುತ್ತಿಲ್ಲ. ಅಂಗನವಾಡಿ ಕೇಂದ್ರಗಳ ಖಾಸಗೀಕ­ರಣ, ಮಧ್ಯಾಹ್ನದ ಬಿಸಿಯೂಟ ಯೋಜನೆ ಹೊರ ಗುತ್ತಿಗೆಗೆ ಮುಂದಾಗಿ­ರುವ ಸರ್ಕಾರ ಆಶಾ ಕಾರ್ಯಕರ್ತೆ­ಯರಿಗೆ ಕನಿಷ್ಠ ವೇತನ ಸಹ ಒದಗಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ.

10 ಸಾವಿರ ರೂಪಾಯಿ ಸಮಾನ ಕನಿಷ್ಠ ವೇತನ ನಿಗದಿಪಡಿಸಬೇಕು. ತಮಿಳುನಾಡು, ಅಸ್ಸಾಂ ರಾಜ್ಯಗಳ ಮಾದರಿಯಲ್ಲಿ ಗುತ್ತಿಗೆ ಕಾಮರ್ಿಕರು ಹಾಗೂ ತರಬೇತಿ ನಿರತರ ಕಾಯಂಗೆ ಕ್ರಮ ಕೈಗೊಳ್ಳಬೇಕು. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಖಾತರಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು.

ಕಾರ್ಮಿಕ ಸಂಘಗಳನ್ನು 45 ದಿನಗಳ ಒಳಗೆ ನೋಂದಣಿ ಮಾಡಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ತರಬೇಕು. ಕೆಲಸದಿಂದ ತೆಗೆದು ಹಾಕ­ಲಾದ ಬಿಸಿಯೂಟ ನೌಕರರನ್ನು ಮುಂದು­ವರೆಸಬೇಕು. ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ನಿಧನ­ರಾದ ಅಡುಗೆ ಸಿಬ್ಬಂದಿ ಪರಿವಾ­ರಕ್ಕೆ ಪರಿಹಾರ ನೀಡಬೇಕು. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ 50 ಸಾವಿರ ರೂಪಾಯಿ ಸಹಾಯ ಧನ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷೆ ಶ್ರೀದೇವಿ ಚಿವುಡೆ, ಉಪಾಧ್ಯಕ್ಷೆ ರೇಖಾ ಹಮಿಲಾಪೂರಕರ್, ಪ್ರಧಾನ ಕಾರ್ಯ­ದರ್ಶಿ ಪ್ರಭು ಸಂತೋಷಕರ್, ಕಾರ್ಯ­ದರ್ಶಿ ಕವಿತಾ ಧೂಮಕುತಿ, ಅಂಗನವಾ­ಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಪದ್ಮಾವತಿ ಸ್ವಾಮಿ, ರೈತ ಮುಖಂಡ ಆರ್.ಪಿ. ರಾಜಾ, ಕಟ್ಟಡ ಕಾರ್ಮಿಕ ಮುಖಂಡ ವಿಶ್ವನಾಥ ಉಪ್ಪೆ, ಬಿ.ಎಸ್.­ಎನ್.ಎಲ್. ನೌಕರರ ಸಂಘದ ಕಲ್ಲಪ್ಪ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಧನರಾಜ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.