ADVERTISEMENT

`ಕನ್ನಡದ ರಕ್ಷಾಮಣಿ ಚನ್ನಬಸವ ಪಟ್ಟದ್ದೇವರು'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 7:53 IST
Last Updated 13 ಡಿಸೆಂಬರ್ 2012, 7:53 IST
ಕಮಲನಗರದಲ್ಲಿ ಬುಧವಾರ ಇಂದಿರಾಬಾಯಿ ಗಾಯಕವಾಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಮಲನಗರದಲ್ಲಿ ಬುಧವಾರ ಅನಾವರಣಗೊಂಡ ಡಾ.ಚನ್ನಬಸವ ಪಟ್ಟದ್ದೇವರ ಪ್ರತಿಮೆ (ಒಳಚಿತ್ರ)
ಕಮಲನಗರದಲ್ಲಿ ಬುಧವಾರ ಇಂದಿರಾಬಾಯಿ ಗಾಯಕವಾಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಮಲನಗರದಲ್ಲಿ ಬುಧವಾರ ಅನಾವರಣಗೊಂಡ ಡಾ.ಚನ್ನಬಸವ ಪಟ್ಟದ್ದೇವರ ಪ್ರತಿಮೆ (ಒಳಚಿತ್ರ)   

ಕಮಲನಗರ: ಉರ್ದು ಮತ್ತು ಮರಾಠಿ ಭಾಷೆಗಳ ಪ್ರಾಬಲ್ಯಕ್ಕೆ ಸಿಲುಕಿದ ಗಡಿ ಭಾಗದ ಕನ್ನಡಕ್ಕೆ ಮರು ಜೀವ ತುಂಬಿದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು ಕನ್ನಡದ ರಕ್ಷಾಮಣಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬಣ್ಣಿಸಿದರು.

ಇಲ್ಲಿನ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಪ್ರಾಂಗಣದಲ್ಲಿ ಬುಧವಾರ ಇಂದಿರಾಬಾಯಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಡಾ.ಚನ್ನಬಸವ ಪಟ್ಟದ್ದೇವರ ಪ್ರತಿಮೆ ಅನಾವರಣ ಹಾಗೂ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಟ್ಟದ್ದೇವರು ಸಮಾಜದಲ್ಲಿನ ಅಶಕ್ತರಿಗೆ ದಾಸೋಹದ ಜೊತೆಗೆ ಅನ್ನ ದಾಸೋಹವನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು. ಕಾಯಕ ತತ್ವಕ್ಕೆ ಹೆಚ್ಚು ಮಹತ್ವ ನೀಡಿ ಲೋಕ ಕಲ್ಯಾಣಕ್ಕಾಗಿ ಹಂಬಲಿಸಿದರು ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗಡಿ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಕೈಗೊಂಡ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿ ರೂವಾರಿಯಾಗಿದ್ದರು ಎಂದರು.

ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಪೂಜ್ಯ ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದ ಮಹಾನ ಚೇತನರು. ಅವರ ತತ್ವ, ಆದರ್ಶಗಳು ಜೀವನಕ್ಕೆ ದಾರಿ ದೀಪವಾಗಿವೆ ಎಂದರು.

ಬಸವ ಸೇವಾ ಪ್ರತಷ್ಠಾನದ ಅಕ್ಕ ಅನ್ನಪೂರ್ಣ, ಹೆಡಗಾಪುರದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಮಲೂರಿನ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯ ಗಾಯಕವಾಡ, ಮದನ ಗಾಯಕವಾಡ, ಪ್ರಕಾಶ ಮಾನಕಾರಿ ಇದ್ದರು.

ಇಂದಿರಾಬಾಯಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ದಿಲೀಪ ಗಾಯಕವಾಡ ಸ್ವಾಗತಿಸಿದರು. ಎನ್.ಬೇಡೆಕರ್ ವಂದಿಸಿದರು. ದೂರದರ್ಶನ ಕಲಾವಿದ ಶ್ರೀನಿವಾಸ್ ನಿರೂಪಿಸಿದರು.
ಪ್ರತಿಭಾವಂತರಿಗೆ ಸನ್ಮಾನ: ಬೀದರ್ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಬಿ.ಇಡ್, ಡಿ.ಇಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ 81 ವಿದ್ಯಾರ್ಥಿಗಳಿಗೆ ಇಂದಿರಾಬಾಯಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ದಿಲೀಪ ಗಾಯಕವಾಡ ಅವರು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಒಟ್ಟು 2.5 ಲಕ್ಷ ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಇಂದಿರಾಬಾಯಿ ಗಾಯಕವಾಡ ಟ್ರಸ್ಟ್‌ನ ಅಧ್ಯಕ್ಷ ದಿಲೀಪ ಗಾಯಕವಾಡ, ಸಹೋದರರಾದ, ವಿಜಯ ಗಾಯಕವಾಡ, ಮದನ ಗಾಯಕವಾಡ ಅವರು ಸಲ್ಲಿಸುತ್ತಿರುವ ಸೇವೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

`ಶತ್ರುಗಳಲ್ಲ, ನಾವು ಮಿತ್ರರು'
ಪಟ್ಟದ್ದೇವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ಮಾಜಿ ಮುಖ್ಯ ಮಂತ್ರಿ ಎನ್.ಧರ್ಮಸಿಂಗ್ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೇವೆ. ಇಬ್ಬರು ಕಳೆದ ಲೋಕ ಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದೇವು. ಆದರೆ ಅದು ರಾಜಕೀಯ. ನಮ್ಮಿಬ್ಬರ ಗೆಳೆತನಕ್ಕೆ ರಾಜಕೀಯ ಎಂದೂ ಅಡ್ಡಿ ಮಾಡಲಾರದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.