ಔರಾದ್: ಕನ್ನಡ ಕೆಲಸಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ಸಂತಪುರ ಅನುಭವ ಮಂಪಟದಲ್ಲಿ ಅಲ್ಲಿಯ ನಾಗರಿಕರಿಂದ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲಿಂಗೈಕ್ಯ ಚೆನ್ನಬಸವ ಪಟ್ಟದ್ದೇವರು ಈ ಭಾಗದಲ್ಲಿ ಕನ್ನಡದ ಕಿಚ್ಚು ಹೊತ್ತಿಸಿದ್ದಾರೆ. ಆ ಕಿಚ್ಚು ಜ್ಯೋತಿಯಾಗಿ ಹೊತ್ತಿಸಿ ಮನೆ ಮನಗಳಲ್ಲಿ ಕನ್ನಡದ ಕಹಳೆ ಮೊಳಗಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಇನ್ನು ಸಾಕಷ್ಟು ಕನ್ನಡದ ಕೆಲಸ ಆಗಬೇಕಿದೆ. ಅನ್ಯ ಭಾಷಿಕರ ಮನವೊಲಿಸಿ ಅವರನ್ನು ಕನ್ನಡದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯಬೇಕು. ತೋರಿಕೆಗಾಗಿ ಕನ್ನಡ ಕೆಲಸ ಆಗಬಾರದು ಎಂಬ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಎಪಿಎಂಸಿ ಉಪಾಧ್ಯಕ್ಷ ಬಾಪುರಾವ ಪಾಟೀಲ, ಕನ್ನಡ ಭಾಷೆಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಇಂಥ ನಾಡಿನಲ್ಲಿ ನಾವು ಹುಟ್ಟಿರುವುದು ಪುಣ್ಯವಂತರು. ನಾವು ಯಾವ ಭಾಷೆ ಕಲಿತರೂ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿ ಭಾಷೆ ಮರೆಯಬಾರದು ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡ ಪ್ರಭಾರಿ ಪಿಎಸ್ಐ ಶಿವರಾಜ ಹೊಕ್ರಾಣೆ, ಮಾಸಿಮಾಡೆ ಅವರು ಮಿತಭಾಷಿಕರಾದರೂ ಛಲದಿಂದ ಕೆಲಸ ಮಾಡುತ್ತಾರೆ. ಸಾಷಕ್ಟು ಜನ ಅಭಿಮಾನಿಗಳು ಹೊಂದಿರುವ ಕಾರಣ ಅವರು ಮತ್ತೊಮ್ಮೆ ಅಧ್ಯಕ್ಷರಾಗಲು ಸಾಧ್ಯವಾಯಿತು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೌತಮಿ ನಿರಂಜನ, ಧುರೀಣ ಬಸವರಾಜ ಬಿರಾದಾರ, ಶಿವರಾಜ ಹಾವಶೆಟ್ಟಿ, ಕಾಮಶೆಟ್ಟಿ ಮೇತ್ರೆ, ಅನಿಲ ಜಿರೋಬೆ, ನೀಲಕಂಠ ಕೊಡಗೆ, ಶಿವಕಾಂತ ಮಸ್ಕಲೆ, ಸಂತೋಷ ನಿಟ್ಟೂರೆ, ವಿಜಯಕುಮಾರ ಜೋಜನಾ, ರವಿಪ್ರಕಾಶ, ಸಂತೋಷ, ಪ್ರಭು ಸ್ವಾಮಿ, ಸುನೀಲ ಪಾಟೀಲ, ವೈಜಿನಾಥ, ಬಸವರಾಜ ಸ್ವಾಮಿ, ಸಂದೀಪ ಉಪಸ್ಥಿತರಿದ್ದರು.
ಬಿ.ಎಂ. ಅಮರವಾಡಿ ಸ್ವಾಗತಿಸಿದರು. ಜಗನ್ನಾಥ ಮೂಲಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭುಶೆಟ್ಟಿ ಸೈನಿಕಾರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.