ಬೀದರ್: `ವಿವಿಧ ಯೋಜನೆಗಳ ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ವಿಳಂಬ ಮನೋಭಾವವನ್ನು ಸಹಿಸುವುದಿಲ್ಲ. ಅಲ್ಲದೆ ನಗರ, ಜಿಲ್ಲೆಯಲ್ಲಿ ಅಪರಾಧಗಳ ನಿಯಂತ್ರಣ ನಿಟ್ಟಿನಲ್ಲಿಯೂ ಪೊಲೀಸ್ ಅಧಿಕಾರಿಗಳಿಗೆ ಇದೇ ಮಾತು ಹೇಳ ಬಯಸುತ್ತೇನೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ವಲ್ಯ್ಪುರ ಮಂಗಳವಾರ ಎಚ್ಚರಿಸಿದರು.
ಜಿಲ್ಲಾ ಆಸ್ಪತ್ರೆ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ, ಈಚೆಗೆ 13 ತೊಲ ಚಿನ್ನಾಭರಣ ಕಳುವಾದ ರಾಂಪುರೆ ಕಾಲೊನಿಯ ನಿವಾಸ ಸೇರಿದಂತೆ ವಿವಿಧೆಡೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು.
ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ, ರೇಲ್ವೆ ಮೇಲುಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಆಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಆ ಬಗೆಗೆ ಮಾಹಿತಿಯನ್ನು ಪಡೆದಿದ್ದೇನೆ. ಅವುಗಳನ್ನು ಗಮನಿಸುತ್ತಿಲ್ಲ ಎಂದಲ್ಲ. ಆ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ವರ್ತುಲ ರಸ್ತೆ ಮತ್ತು ರೇಲ್ವೆ ಕೆಳ ಸೇತುವೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಜಿಲ್ಲಾಧಿಕಾರಿ ಪರವಾಗಿ ಉಸ್ತುವಾರಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ನನಗೆ ಮಾಹಿತಿ ಕೊರತೆ ಎಂದು ಭಾವಿಸಬೇಕಿಲ್ಲ ಎಂದರು.
ಜಿಲ್ಲಾಸ್ಪತ್ರೆಗೆ ಭೇಟಿ: ಅಧಿಕಾರಿಗಳ ತಂಡದ ಜೊತೆಗೆ ಮೊದಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ಕೆಲ ರೋಗಿಗಳ ಜೊತೆಗೆ ಮಾತನಾಡಿ ಚಿಕಿತ್ಸೆಯನ್ನು ನೀಡುತ್ತಿರುವ ಕ್ರಮ ಕುರಿತು ಮಾಹಿತಿ ಪಡೆದರು. ಅಲ್ಲದೆ, ಎಕ್ಸ್ರೇ ಮತ್ತು ಔಷಧಿ ದಾಸ್ತಾನು ವಿಭಾಗಕ್ಕೂ ಭೇಟಿ ನೀಡಿದ ಅವರು ಹಾಜರಾತಿ, ದಾಖಲೆಗಳನ್ನು ಪರಿಶೀಲಿಸಿದರು.
ಎಕ್ಸ್ರೇ ವಿಭಾಗದಲ್ಲಿ ಇಂದು ಒಟ್ಟಾರೆ 60 ಎಕ್ಸ್ರೇ ತೆಗೆದಿರುವ ದಾಖಲೆಗಳು ಇವೆ. ಆದರೂ, ಸಿಬ್ಬಂದಿ ಇನ್ನೂ ಹೆಚ್ಚಿನ ಚುರುಕಿನಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಲಹೆ ಮಾಡಿದರು.
ಬಳಿಕ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ತೆರಳಿದ ಅವರು, ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಪ್ರಗತಿ ವೀಕ್ಷಿಸಿದರು. ಯಾವ ಅನುದಾನದಡಿ, ಎಷ್ಟು ಹಣ ಬಿಡುಗಡೆಯಾಗಿದೆ, ಆರಂಭ ಯಾವಾಗ, ಕಾಮಗಾರಿ ಎಂದು ಮುಗಿಯಲಿದೆ ಎಂದು ಮಾಹಿತಿ ಕೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನೂರ್ ಮನ್ಸೂರ್ ಅವರು, ವುಡನ್ ಫ್ಲೋರ್ ಹಾಕುವಕೆಲಸ ಸೇರಿದಂತೆ ಕೆಲ ಕಾಮಗಾರಿಗಳು ಬಾಕಿ ಉಳಿದಿವೆ. ಆದಷ್ಟು ಶೀಘ್ರ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿ,ವರ್ತುಲ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು.
ಸಚಿವರ ಭೇಟಿ ಮೂಡಿಸಿದ ಅಚ್ಚರಿ
ಬೀದರ್: ನಗರ, ಜಿಲ್ಲೆಯಲ್ಲಿ ಆಗಾಗ್ಗೆ ಅಪರಾಧ ಪ್ರಕರಣಗಳು ನಡೆದರೂ, ಈಚೆಗೆ 13 ತೊಲ ಆಭರಣ ಕಳುವಾದ ಘಟನೆ ನಡೆದಿದ್ದ ರಾಂಪುರೆ ಕಾಲೊನಿಯ ನಿವಾಸಕ್ಕೆ ಮಂಗಳವಾರ ಉಸ್ತುವಾರಿ ಸಚಿವ ಸುನೀಲ್ ವಲ್ಯ್ಪುರ ಅವರೇ ಸ್ವತಃ ಭೇಟಿ ನೀಡಿ ಪರಿಶೀಲಿಸುವ ಮೂಲಕ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಅಚ್ಚರಿ ಮೂಡಿಸಿದರು.
ಕಳವು ಪ್ರಕರಣ ನಡೆದ ನಿವಾಸಕ್ಕೆ ತೆರಳಿ ಮನೆಯವರಿಂದ ಮಾಹಿತಿ ಪಡೆದ ಸಚಿವರು, ಇಂಥ ಪ್ರಕರಣಗಳು ಘಟಿಸದಂತೆ ಎಚ್ಚರಿಕೆ ವಹಿಸಬೇಕು. ಇಂಥದನ್ನು ನಾನು ಸಹಿಸುವುದಿಲ್ಲ. ಪುನರಾವರ್ತನೆಯಾದಂತೆ ಗಸ್ತು ಹೆಚ್ಚಿಸಬೇಕು ಎಂದು ಬಳಿಕ ಪೊಲೀಸ ಅಧಿಕಾರಿಗಳಿಗೆ ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ಮರ್ತೂರಕರ್, ಡಿವೈಎಸ್ಪಿ ವೈಜನಾಥ ಜೋತಿ, ಆ ಭಾಗದ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರು ಸ್ವತಃ ಹಾಜರಿದ್ದು ಆ ಕಳವು ಘಟನೆಯ ಬಗೆಗೆ ಮಾಹಿತಿಯನ್ನು ಒದಗಿಸಿದರು.
ಸಚಿವರ ಕಾರು, ಬೆಂಬಲಿಗ ಕಾರುಗಳು ಸೇರಿದಂತೆ ಸಾಲು ಸಾಲು ವಾಹನಗಳು ರಾಂಪುರೆ ಕಾಲೋನಿಯತ್ತ ತೆರಳಿದಾಗ ನಾಗರಿಕರಲ್ಲಿ ಇನ್ನಿಲ್ಲದ ಕುತೂಹಲ ಮೂಡಿತು. ಕುತೂಹಲದಿಂದ ಹೊರ ನಿಂತು ನೋಡುತ್ತಿದ್ದು ಗಮನಕ್ಕೆ ಬಂದಿತು.
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೇ ಸ್ವತಃ ಸ್ಥಳ ಪರಿಶೀಲನೆ, ನಿವಾಸಕ್ಕೆ ಭೇಟಿ ನೀಡಿದ್ದು ಏಕೆ, ಈಪ್ರಕರಣದ ಮಹತ್ವ ಏನು ಎಂಬುದು ಅಲ್ಲಿ ಕೆಲ ಅಧಿಕಾರಿಗಳಲ್ಲೇ ಚರ್ಚೆಗೆ ಗ್ರಾಸವಾದರೂ, ಉತ್ತರ ಮಾತ್ರ ದೊರೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.