ಔರಾದ್: ಖ್ಯಾತ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬುಲ್ ಕಲಮ್ ಆಜಾದ್ ಅವರ ಜಯಂತಿ ಕಾರ್ಯಕ್ರಮ ಭಾನುವಾರ ಇಲ್ಲಿಯ ಕೊಳಚೆ ಪ್ರದೇಶದ ಮಕ್ಕಳ ಜೊತೆ ಆಚರಿಸಲಾಯಿತು.
ಧುರೀಣ ಅಬ್ದುಲ್ ರಹೀಮ್ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗೆ ಪಾಟಿ ಬಳಪ ನೀಡಿ ಅಕ್ಷರ ಜ್ಞಾನ ನೀಡಲಾಯಿತು. ಇದೇ ವೇಳೆ ಆ ಮಕ್ಕಳ ಪಾಲಕರಿಗೆ ಶಿಕ್ಷಣದ ಮಹತ್ವ ಮತ್ತು ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿ ಒಕ್ಕೂಟದ ಸುಧಾಕರ ಕೊಳ್ಳೂರ್, 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಬೇಕು ಎಂದು ಭಾರತ ಸಂವಿಧಾನ ಹೇಳಿದೆ. ಇದ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಅನೇಕ ಅಲೆಮಾರಿ ಜನಾಂಗದ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದರು.
ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಮಸನ್ ಭಾವಿಟ್ಟಿ, ಮಕ್ಕಳಿಗೆ ಪಾಟಿ. ಬಳಪ ನೀಡಿ, ಸರ್ಕಾರ ಇಂಥವರಿಗೆ ಯೋಜನೆಗಳು ಜಾರಿಗೊಳಿಸಿದರೂ ಅವರಿಗೆ ತಲುಪುತ್ತಿಲ್ಲ. ಇಲ್ಲಿಯ ಜನ ಈಗಲೂ ಚೆಪ್ಪರದ ಗುಡಿಸಲಿನಲ್ಲಿ ವಾಸ ಮಾಡುತ್ತಿರುವುದು ತುಂಬ ಕಳವಳಕಾರಿ ಸಂಗತಿ ಎಂದರು.
ಸರ್ಕಾರ ಗುಡಸಲು ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಹೇಳುತ್ತಿದೆ. ಮೊದಲು ಇಂಥವರಿಗೆ ಸೋರು ಕಲ್ಪಿಸಿ ಅವರ ಕೈಗೆ ಕೆಲಸ ಕೊಟ್ಟು ಅವರಿಗೂ ಈ ದೇಶದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜನಪರ ಕಾಳಜಿ ಇರುವ ವ್ಯಕ್ತಿಗಳು ಮುಂದೆ ಬರಬೇಕಾಗಿದೆ ಎಂದು ಹೇಳಿದರು.
ರಾಜು ಕೋಟೆ, ಅಶೋಕ, ಲಕ್ಷ್ಮಣ ರಾಠೋಡ, ರವಿ ಶರ್ಮ, ರವಿ ಚವ್ಹಾಣ್, ವಿಲಾಸ ಕದಂ.
ನೀಲಕಂಠರಾವ ಉಪಸ್ಥಿತರಿದ್ದರು. ಇದೇ ವೇಳೆ ಮಕ್ಕಳಿಗೆ ಮೌಲಾನ ಅಬುಲ್ ಕಲಾಮ್ ಆಜಾದ್ ಅವರ ಪರಿಚಯ ಮಾಡಿಕೊಡಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚುಣಿಯಲ್ಲಿದ್ದರು. ಇಸ್ಲಾಂ ಧರ್ಮದ ಬಗ್ಗೆ ಆಳವಾದ ಜ್ಞಾನ ಹೊಂದಿದ ಅವರು ಮಹಾತ್ಮಗಾಂಧಿಜೀ ನಿಕಟ ಸಂಬಂಧ ಹೊಂದಿದ್ದರು.
ದೇಶದ ಮೊದಲ ಪ್ರಧಾನಿ ನೆಹರು ಮಂತ್ರಿ ಮಂಡಲದಲ್ಲಿ ವಿದ್ಯಾ ಇಲಾಖೆ ಮಂತ್ರಿಯಾಗಿ ಕೆಲಸ ಮಾಡಿದ್ದರು ಎಂದು ತಿಳಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.