ಬೀದರ್: ನಗರದ ಐತಿಹಾಸಿಕ ಕೋಟೆಯ ಸುತ್ತಲಿನ ಕಂದಕವನ್ನು ಸ್ವಚ್ಚಗೊಳಿಸುವಾಗ ಶುಕ್ರವಾರ ದಲ್ಹನ್ ದರ್ವಾಜಾ ಬಳಿ ಬರೀದ್ ಶಾಯಿ ಅವರ ಅವಧಿಯದ್ದು ಎಂದು ಹೇಳಲಾಗಿರುವ ತೋಪು ಪತ್ತೆಯಾಗಿದೆ.
ಕಸ, ಒಳಚರಂಡಿಯ ಕಲ್ಮಶ ನೀರಿನ ನಡುವೆ ಇಷ್ಟು ವರ್ಷ ಇದ್ದರೂ ತೋಪು ವಿರೂಪಗೊಂಡಿಲ್ಲ. ಶುಕ್ರವಾರ ಪತ್ತೆಯಾದ ತೋಪು ಸುಮಾರು 1.8 ಮೀಟರ್ ಉದ್ದವಿದ್ದು, ಅದರಲ್ಲಿ 1 ಅಡಿ ತ್ಯಾಜ್ಯವಿದೆ. ತೋಪು ನಡುವೆ ಅದನ್ನು ಎತ್ತಲು ಕಬ್ಬಿಣದ ಕೊಂಡಿಯೂ ಇದೆ.
ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮಂಡಳಿಯು ಕೈಗೊಂಡ ಬಳಿಕ ಪತ್ತೆಯಾಗುತ್ತಿರುವ ಎರಡನೇ ತೋಪು ಇದು. ಈ ಮುನ್ನ ನಯೀ ಕಮಾನ್ ಬಳಿಯು ಕಂದಕದಲ್ಲಿ ಒಂದು ತೋಪು ಪತ್ತೆಯಾಗಿತ್ತು.
ಈ ಎರಡೂ ತೋಪು ಅನ್ನು ಜಿಲ್ಲಾಧಿಕಾರಿ ಸೂಚನೆಯನ್ನು ಆಧರಿಸಿ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ವಹಿಸಿರುವ ಮಂಡಳಿಯ ಎಇಇ ಶಶಿಕಾಂತ ಮಳ್ಳಿ ಹೇಳಿದರು.
ನಗರದಲ್ಲಿ ಜನವಾಡ ರಸ್ತೆ ಸಮೀಪದ ಟಸ್ಕರ್ ರಸ್ತೆಯಿಂದ ದಲ್ಹನ್ ದರ್ವಾಜಾವರೆಗಿನ ಸುಮಾರು 3.2 ಕಿ.ಮೀ. ಉದ್ದದ ಕಂದಕವನ್ನು ಸ್ವಚ್ಛಗೊಳಿಸುವ ಕಾರ್ಯ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಎಡಿಬಿ ನೆರವಿನಲ್ಲಿ ಒಟ್ಟು ₨3.25 ಕೋಟಿ ವೆಚ್ಚದಲ್ಲಿ ಈ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದೆ ಎಂದರು. ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.