ADVERTISEMENT

ಗುಣಮಟ್ಟದ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 11:05 IST
Last Updated 2 ಮಾರ್ಚ್ 2011, 11:05 IST

ಬೀದರ್: ಗುಣಮಟ್ಟದ ಶಿಕ್ಷಣ ಇಂದಿನ ತುರ್ತು ಅವಶ್ಯಕತೆ ಆಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು.
ನಗರದ ವಿಶಾಲ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಬಸವತತ್ವ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಪಡೆಯುವುದಕ್ಕಾಗಿ ಸಾಕಷ್ಟು ಪೈಪೋಟಿ ನಡೆಸಬೇಕಾಗಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳು ಉನ್ನತ ಗುರಿ ಸಾಧಿಸಬಹುದಾಗಿದೆ ಎಂದು ಹೇಳಿದರು.ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಕಠಿಣ ಪರಿಶ್ರಮದೊಂದಿಗೆ ವ್ಯಾಸಂಗ ಮಾಡಬೇಕು. ಡಾಕ್ಟರ್, ಎಂಜಿನಿಯರ್ ಮತ್ತಿತರ ಉನ್ನತ ಗುರಿಗಳನ್ನು ಇಟ್ಟಿಕೊಂಡು ಅದರ ಸಾಕಾರಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ಮಹಿಳೆಯರಿಗೆ ಶಿಕ್ಷಣ ಒದಗಿಸುವುದಕ್ಕಾಗಿ ಆರಂಭಿಸಿರುವ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿರುವುದು ಸಂತಸದ ಸಂಗತಿ ಎಂದು ಹೇಳಿದರು.ಪ್ರಸ್ತುತ ಸಂಸ್ಕಾರಯುತ ಶಿಕ್ಷಣ ಜರೂರಿಯಾಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರು ಪ್ರತಿಪಾದಿಸಿದರು.ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಸಿಗಬೇಕು. ಶಿಕ್ಷಕರು ಮತ್ತು ಪಾಲಕರು ಈ ನಿಟ್ಟಿನಲ್ಲಿ ಸದಾ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಚಿತ್ರನಟ ಬಿ.ಜೆ. ವಿಷ್ಣುಕಾಂತ, ನಗರಸಭೆ ಅಧ್ಯಕ್ಷೆ ಶ್ರೀದೇವಿ ಕರಂಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬುರಾವ ಬಿರಾದಾರ, ಧೂಳಪ್ಪ ಸುರಂಗೆ, ಪೂಜಾದೇವಿ ಡಿ.ಕೆ., ಮಾಜಿ ಸದಸ್ಯ ಅಮೃತರಾವ ಚಿಮಕೋಡೆ, ಬಸವತತ್ವ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಶರಣಪ್ಪ ಬಲ್ಲೂರ, ಅಧ್ಯಕ್ಷ ವೈಜಿನಾಥ ಕಮಠಾಣೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಮಾಳಪ್ಪ ಅಡಸಾರೆ, ಉದಯಭಾನು ಹಲವಾಯಿ, ಧನರಾಜ ಕರಂಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಕಾಶ ಲಕಶೆಟ್ಟಿ ಸ್ವಾಗತಿಸಿದರು. ದಿಲೀಪಕುಮಾರ ಕಮಠಾಣೆ ವರದಿ ವಾಚನ ಮಾಡಿದರು. ಬಸವರಾಜ ಬಶೆಟ್ಟಿ ನಿರೂಪಿಸಿದರು. ಶಿವಲೀಲಾ ಟೊಣ್ಣೆ ವಂದಿಸಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು ಲಕ್ಷ್ಮಿಬಾಯಿ ಕಮಠಾಣೆ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಲಿಡ್ಕರ್ ಮಂಡಳಿ ಅಧ್ಯಕ್ಷ ರಾಜೇಂದ್ರ ವರ್ಮಾ ಮತ್ತಿತರರು ಉಪಸ್ಥಿತರಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.