ಬಸವಕಲ್ಯಾಣ: ಕೆಲ ದಿನಗಳಿಂದ ₹10 ರ ನಾಣ್ಯ ಚಲಾವಣೆ ಆಗದೆ ಇಲ್ಲಿನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದಿಂದ ನಾಣ್ಯವನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಅಂಗಡಿ, ಹೋಟಲ್, ಇತರೆ ವ್ಯಾಪಾರ ಕೇಂದ್ರಗಳು, ಅಟೋಗಳಲ್ಲಿ ಈ ನಾಣ್ಯ ಕೊಟ್ಟರೆ ‘ಇದು ನಡೆಯುವುದಿಲ್ಲ. ಜನರು ಯಾರೂ ಇದನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ನಿರಾಕರಿಸಲಾಗುತ್ತಿದೆ. ಗ್ರಾಹಕರು ಪರದಾಡುವ ಪರಿಸ್ಥಿತಿ ಇಲ್ಲಿದೆ.
‘ಮುಚಳಂಬದ ಬ್ಯಾಂಕ್ ಒಂದರಲ್ಲಿ ನಾಣ್ಯ ಬದಲಾವಣೆಗೆ ಹೋದರೆ ಅವರೂ ಸ್ವೀಕರಿಸಲು ನಿರಾಕರಿಸಿದರು. ಎಲ್ಲಿಯೂ ಈ ನಾಣ್ಯ ನಡೆಯುತ್ತಿಲ್ಲ. ಹೀಗಾಗಿ ಬ್ಯಾಂಕ್ ನಲ್ಲಿಯೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ’ ಎಂದು ತೊಗಲೂರಿನ ರಾಜಕುಮಾರ ಗೊಂಡ ಗೋಳು ತೋಡಿಕೊಂಡಿದ್ದಾರೆ.
‘ನಾನು ಪ್ರತಿದಿನ ಹಾಲು ಮಾರಾಟ ಮಾಡುತ್ತಿದ್ದು ಅನೇಕರು ₹10ರ ನಾಣ್ಯ ಕೊಡುತ್ತಾರೆ. ವ್ಯಾಪಾರಸ್ಥರು ಇದನ್ನು ತೆಗೆದುಕೊಳ್ಳಲು, ನಿರಾಕರಿಸಿದರೆ ತಪ್ಪಿಲ್ಲ. ಆದರೆ, ಬ್ಯಾಂಕ್ ನವರು ಕೂಡ ಹೀಗೆ ನಾಣ್ಯ ಚಲಾವಣೆ ಆಗುವುದಿಲ್ಲ ಎಂದು ನಿರಾಕರಿಸಿದರೆ ಏನು ಮಾಡುವುದು’ ಎಂದು ಅವರು ಪ್ರಶ್ನಿಸಿದ್ದಾರೆ.
‘ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಇದುವರೆಗೆ ಇಂಥ ನಿರ್ಣಯ ಪ್ರಕಟಿಸಿಲ್ಲ. ₹10ರ ನಾಣ್ಯ ಚಲಾವಣೆ ಇಲ್ಲ ಎಂದು ಯಾರಿಗೂ ಹೇಳಲು ಬರುವುದಿಲ್ಲ’ ಎಂದು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ‘ನಾಣ್ಯ ಎಲ್ಲಿಯೂ ತೆಗೆದುಕೊಳ್ಳದಿದ್ದರೆ ನಮ್ಮ ಬ್ಯಾಂಕಿನ ಖಾತೆಗೆ ಜಮೆ ಮಾಡಬಹುದು’ ಎಂದಿದ್ದಾರೆ.
*
ಕೆಲ ದಿನಗಳಿಂದ ಯಾವುದೇ ಅಂಗಡಿ, ಹೋಟಲ್ ಗಳಲ್ಲಿ ₹ 10 ರ ನಾಣ್ಯ ತೆಗೆದುಕೊಳ್ಳದಿ ರುವುದರಿಂದ ಪರದಾಡುವ ಪರಿಸ್ಥಿತಿ ಇದೆ.
-ಸಂಜೀವ ಮುದಗಡೆ,
ಸ್ಥಳಿಯ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.