ADVERTISEMENT

‘ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 10:24 IST
Last Updated 21 ಡಿಸೆಂಬರ್ 2017, 10:24 IST

ಬೀದರ್: ಮತದಾರರು ಚುನಾವಣೆಗಳಲ್ಲಿ ಯೋಗ್ಯ ವ್ಯಕ್ತಿಗಳನ್ನು ಮಾಡಬೇಕು ಎಂದು ಯೋಗಕ್ಷೇಮ ಧಾರವಾಡ ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮನವಿ ಮಾಡಿದರು.

ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಆಗಬೇಕಾದರೆ ಅರ್ಹರನ್ನು ನಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡುವ ಅಗತ್ಯ ಇದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಸಂವಿಧಾನ ಉತ್ಕೃಷ್ಟ ಆಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಇದನ್ನು ಅನುಕರಿಸುತ್ತಿವೆ. ಸಮಾನತೆ, ಸಾಮಾಜಿಕ ನ್ಯಾಯ ಸಂವಿಧಾನದ ಮೂಲ ಆಶಯಗಳಾಗಿವೆ ಎಂದು ಹೇಳಿದರು.

ADVERTISEMENT

ವಿಶ್ವದಲ್ಲೇ ಅತಿದೊಡ್ಡ ಯುವ ಪಡೆ ದೇಶದಲ್ಲಿ ಇದೆ. ಯುವಕರು ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯ ಬಗೆಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಕಳೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅರ್ಹರನ್ನು ಆಯ್ಕೆ ಮಾಡುವಂತೆ ಸಂಸ್ಥೆ ಮತದಾರರಲ್ಲಿ ಮನವಿ ಮಾಡಿತ್ತು ಎಂದು ಹೇಳಿದರು.

ಚುನಾವಣೆಗೆ ನಿಂತವರಲ್ಲಿ ಯಾರೂ ಅರ್ಹರಾಗಿರದಿದ್ದರೆ ಸಂವಿಧಾನ ನೀಡಿರುವ ನೋಟಾ ಅಧಿಕಾರವನ್ನು ಚಲಾಯಿಸಬೇಕು. ಈ ಮೂಲಕ ರಾಜಕೀಯ ಪಕ್ಷಗಳಿಗೆ ಸಂದೇಶ ರವಾನಿಸಬೇಕು ಎಂದರು.

ರಾಷ್ಟ್ರೀಯ ಪಕ್ಷಗಳು ಉಮೇದುವಾರರನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಮತದಾರರು ರಾಷ್ಟ್ರೀಯ ಪಕ್ಷಗಳ ಆಮಿಷಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.

ಸಂವಿಧಾನ ಕಲ್ಪಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಹೊಣೆ ಎಲ್ಲರ ಮೇಲಿದೆ. ಮತ ಚಲಾವಣೆ ಮಾಡುವಾಗ ಪ್ರತಿಯೊಬ್ಬರೂ ಈ ಬಗೆಗೆ ವಿಚಾರ ಮಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.