ADVERTISEMENT

ದುರಾಸೆಯಿಂದ ಅಪರಾಧ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:25 IST
Last Updated 4 ಅಕ್ಟೋಬರ್ 2011, 8:25 IST

ಬೀದರ್: ಆಸ್ತಿ ಹಾಗೂ ಸಂಪತ್ತು ಗಳಿಸುವ ವ್ಯಾಮೋಹದಿಂದ ಪ್ರಸ್ತುತ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ತಿಳಿಸಿದರು.

ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಧ್ಯಸ್ಥಿಕೆಗಾರಿಕೆ ಕಾನೂನು ಅರಿವು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಧ್ಯಸ್ಥಿಕೆ ಕಾನೂನು ಮೂಲಕ ವಾದ-ವಿವಾದ ಬಗೆ ಹರಿಸಿಕೊಂಡರೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದರು.

ದೇಶದ ಆಸ್ತಿಯಾಗಿರುವ ಮಹಿಳೆಯರು ವರದಕ್ಷಿಣೆ ಮತ್ತು ಕೌಟುಂಬಿಕ ಕಲಹಗಳಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣರಾಗುತ್ತಿದ್ದಾರೆ. ಇದನ್ನು ತಡೆಯುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕಾನೂನು ಮೂಲಕ ಕಡಿಮೆ ಖರ್ಚಿನಲ್ಲಿ ವಾದ ವಿವಾದಗಳು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ರೂಪಿಸಲಾಗಿದೆ ಎಂದು ಉದ್ಘಾಟನೆ ನೆರವೇರಿಸಿದ್ದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಡಾ. ಶಶಿಕಲಾ ಎಂ. ಅಭಿಪ್ರಾಯಪಟ್ಟರು. 

ಮಧ್ಯಸ್ಥಿಕೆ ಮೂಲಕ ನೀಡುವ ತೀರ್ಪು ನ್ಯಾಯಾಲಯದಲ್ಲಿ ಕೈಗೊಳ್ಳುವ ತೀರ್ಪುಗಳು ಪ್ರತಿರೂಪವಾಗಿರುತ್ತದೆ. ಆದರೆ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇಬ್ಬರು ಕಕ್ಷಿದಾರರು ಕೂಡಿಕೊಂಡು ತಮ್ಮ ವಾದ ಪ್ರತಿವಾದ ಮಂಡಿಸುತ್ತಾರೆ. ಇದರಿಂದ ಸಂಧಾನದ ಸೂತ್ರದ ಮೂಲಕ ವಿವಾದ ಬಗೆ ಹರಿಸಲು ಸಹಕಾರಿ ಆಗುತ್ತದೆ ಎಂದು ವಿವರಿಸಿದರು.

ಮಧ್ಯಸ್ಥಿಕೆ ಕಾನೂನು ಕುರಿತು ವಕೀಲ ವೈಜಿನಾಥ ಪಾಟೀಲ್ ಮಾತನಾಡಿದರು. ವಕೀಲರಾದ ದಶವಂತ ವಾಡೇಕರ್, ಶಕುಂತಲಾ ಪಾಟೀಲ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಹಾದೇವ ಪಾಟೀಲ್, ಪ್ರೊ. ಶಿವನಾಥ ಪಾಟೀಲ್ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಪ್ರೇಮಿಳಾ ಸಿರ್ಸೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.