ADVERTISEMENT

ಪರೀಕ್ಷಾ ಅಕ್ರಮ: ಮಾನ್ಯತೆರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:05 IST
Last Updated 11 ಫೆಬ್ರುವರಿ 2011, 7:05 IST

ಬೀದರ್: ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ನರ್ಸಿಂಗ್ ಕಾಲೇಜುಗಳ ಮಾನ್ಯತೆ ಶಾಶ್ವತವಾಗಿ ರದ್ದುಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಗುಲ್ಬರ್ಗ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಪವಾರ್ ಆಗ್ರಹಿಸಿದರು.ರಾಜ್ಯದಲ್ಲಿ 700 ನರ್ಸಿಂಗ್ ಕಾಲೇಜುಗಳಿದ್ದು, ಬಹುತೇಕ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪರೀಕ್ಷಾ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಬುಧವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪರೀಕ್ಷೆಯಲ್ಲಿ ನಡೆಯುವ ನಕಲು ಚಟುವಟಿಕೆಗಳಿಗೆ ಆಡಳಿತ ಮಂಡಳಿಗಳು ಪ್ರೋತ್ಸಾಹ ನೀಡುತ್ತಿವೆ. ಹೀಗಾಗಿ ಅಂಥ ಆಡಳಿತ ಮಂಡಳಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ನರ್ಸಿಂಗ್ ಶಿಕ್ಷಣ ಸಂಸ್ಥೆಗಳು ಹಣ ನೀಡಿದವರಿಗೆ ಸರ್ಟಿಫಿಕೆಟ್ ಕೊಡುತ್ತಿವೆ. ಭೂಗತ ಚಟುವಟಿಕೆಗಳ ಮಾದರಿಯಲ್ಲಿ ಶಿಕ್ಷಣ ಮಾಫಿಯಾಕ್ಕೆ ನಾಂದಿ ಹಾಡಿವೆ. ಕೊಟ್ಯಂತರ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.

ಬೆಂಗಳೂರಿನಲ್ಲಿ ಈಚೆಗೆ ನಡೆದ ನರ್ಸಿಂಗ್ ಪರೀಕ್ಷಾ ಅಕ್ರಮದಲ್ಲಿ ಬೀದರ್‌ನ ಕಾಲೇಜುಗಳು ಸಹ ಭಾಗಿಯಾಗಿವೆ. ಆದಕಾರಣ ಸಂಬಂಧಪಟ್ಟ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿ ಪರಿಷತ್ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಶಾಸಕ ರಹೀಮ್‌ಖಾನ್ ಅಮಾಯಕ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು. ಪ್ರಕರಣ ದಾಖಲಿಸುವ ಮೂಲಕ ಶಾಸಕರು ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟ ಆಡುತ್ತಿರುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.