ಔರಾದ್: ಈ ಭಾಗದಲ್ಲಿ ಜಾತ್ರೆ, ಉತ್ಸವ ನಿಮಿತ್ತ ನಡೆಯುವ ಅಂತರರಾಜ್ಯ ಪಶು ಪ್ರದರ್ಶನದ ಬಹುಮಾನ ಮೊತ್ತ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಪ್ರಕಾಶ ಮಂಡೋಳಿ ಹೇಳಿದರು.
ಅಮರೇಶ್ವರ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಇಲ್ಲಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಅತ್ಯುತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಈಗ ನೀಡಲಾಗುವ ಪ್ರಥಮ ಬಹುಮಾನದ ಮೊತ್ತ 5 ಸಾವಿರದಿಂದ 15 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ದ್ವಿತೀಯ ಬಹುಮಾನ 5 ಸಾವಿರದಿಂದ 10 ಸಾವಿರ, ತೃತೀಯ ಬಹುಮಾನ 3 ಸಾವಿರದಿಂದ 5 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಗಡಿ ಭಾಗದ ಮಾರುಕಟ್ಟೆಗಳ ಸುಧಾರಣೆಗಾಗಿ ಮಾರಾಟ ಮಂಡಳಿ ಗಂಭೀರ ಚಿಂತನೆ ನಡೆಸಿದೆ. ಈಚೆಗೆ ನಡೆದ ಮಂಡಳಿ ಸಭೆಯಲ್ಲಿ ಪ್ರತಿ ಮಾರುಕಟ್ಟೆಗೆ 25 ಲಕ್ಷ ರೂಪಾಯಿ ಅನುದಾನ ಕೊಡಲು ನಿರ್ಣಯಿಸಲಾಗಿದೆ. ಇಲ್ಲಿಯ ಉತ್ಪನ್ನ ನೆರೆ ರಾಜ್ಯದ ಮಾರುಕಟ್ಟೆಗೆ ಹೋಗದಂತೆ ನಿಗಾ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ಕರ ಇಳಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಇಲ್ಲಿಯ ಮಾರುಕಟ್ಟೆ ಸುಧಾರಣೆಗಾಗಿ ತಾವು ಎಲ್ಲ ರೀತಿಯಿಂದ ಸಹಕರಿಸುವುದಾಗಿ ಹೇಳಿದರು. ಡಿಸಿಸಿ ಬ್ಯಾಂಕ್ನಿಂದ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ವೆಂಕಟರಾವ ಡೊಂಬಾಳೆ ಸ್ವಾಗತಿಸಿದರು. ಶಿವರಾಜ ಅಲ್ಮಾಜೆ ನಿರೂಪಿಸಿ ವಂದಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಉಪಾಧ್ಯಕ್ಷೆ ಜೈಶ್ರೀ ಘಾಟೆ, ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಮೀಸೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ಗುಲ್ಬರ್ಗ ಕೃಷಿ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕ ಎಚ್. ಪರಶುರಾಮ, ಭೀಮರಾವ ಪಾಟೀಲ ಡಿಗಿ, ಚೆನ್ನಬಸಪ್ಪ, ಎಪಿಎಂಸಿ ಉಪಾಧ್ಯಕ್ಷ ಬಾಪುರಾವ ಪಾಟೀಲ, ಕಾರ್ಯದರ್ಶಿ ವಿಜಯಕುಮಾರ ಗಳವೆ, ರವಿ ರಾಠೋಡ, ಪ್ರಭುರಾವ ಲದ್ದೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.