ಬೀದರ್: ಅಂಗನವಾಡಿ ಕಾರ್ಯಕರ್ತೆರ್ಯರು ಮತ್ತು ಸಹಾಯಕಿಯರಿಗೆ ಮಾಸಿಕ ಕನಿಷ್ಠ 5 ಸಾವಿರ ರೂಪಾಯಿ ಪಿಂಚಣಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನಗರದ ತಹಸೀಲ್ ಕಚೇರಿ ಎದುರು ಬುಧವಾರ ಧರಣಿ ಸತ್ಯಾಗ್ರಹ ನಡೆಸಿತು.
ಸರ್ಕಾರ ಸದ್ಯ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ದೂರಿದ್ದಾರೆ.
ಅಂಗನವಾಡಿ ನೌಕರರು ಯಾವುದೇ ಸೇವಾ ಭದ್ರತೆ ಇಲ್ಲದೇ ಶಾಲಾಪೂರ್ವ ಶಿಕ್ಷಣದ ಜೊತೆಗೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಹೀಗಾಗಿ ಸೇವೆ ಕಾಯಂಗೊಳಿಸಿ ಮಾಸಿಕ ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಬಾರದು. ಇತರೆ ಇಲಾಖೆಗಳ ಕೆಲಸ ವಹಿಸಬಾರದು. ಮನೆ ಮಂಜೂರು ಮಾಡಬೇಕು. ಸರ್ಕಾರಿ ನೌಕರರ ಮಾದರಿಯಲ್ಲಿ 6 ತಿಂಗಳ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ಫೆಡರೇಷನ್ ರಾಜ್ಯ ಸಮಿತಿಯ ಸದಸ್ಯೆ ಲಕ್ಷ್ಮಿ ದಂಡಿ, ಪ್ರಮುಖರಾದ ಸುಲೋಚನಾ ಪೂಜಾರಿ, ಸಂಪಾವತಿ ಹೊಕ್ರಾಣ, ಮಂಗಳಾ ಸಾತೋಳಿ, ಶಕುಂತಲಾ ಅಮಲಾಪುರ, ಬಸಮ್ಮ ಹಾರೂರಗೇರಿ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.