ಬಸವಕಲ್ಯಾಣ: ತಾಲ್ಲೂಕಿನ ಗಡಿಗ್ರಾಮ ಹತ್ತರ್ಗಾದಲ್ಲಿನ ಕೊಳವೆ ಬಾವಿಗೆ ಸಾಕಷ್ಟು ನೀರಿದ್ದರೂ ಉಪಯೋಗ ಆಗುತ್ತಿಲ್ಲ. ಪೈಪ್ಲೈನ್ ಮೂಲಕ ಅಲ್ಲಿನ ನೀರನ್ನು ಟ್ಯಾಂಕ್ಗೆ ಒಯ್ಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರೂ ಯಾರೂ ಲಕ್ಷ ಕೊಡುತ್ತಿಲ್ಲ.
ಈ ಗ್ರಾಮ ಬೆಣ್ಣೆತೊರೆ ನದಿ ದಂಡೆಯಲ್ಲಿದ್ದರೂ ಕೆಲ ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮಕ್ಕೆ ನೀರು ಪೋರೈಸುವ ಕಿರುನೀರು ಪೋರೈಕೆ ಯೋಜನೆಯ ಕೊಳವೆಬಾವಿಗೆ ಅಲ್ಪಸ್ವಲ್ಪ ನೀರಿರುವ ಕಾರಣ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರಿನ ಸರಬರಾಜು ಆಗುತ್ತಿಲ್ಲ. ಆದ್ದರಿಂದ ದೂರದಿಂದ ಕೊಡಗಳನ್ನು ಹೊತ್ತುಕೊಂಡು ನೀರು ತರಬೇಕಾಗುತ್ತಿದೆ.
ಹಾಗೆ ನೋಡಿದರೆ, ಅಧಿಕಾರಿಗಳ ನಿಷ್ಕಾಳಜಿತನವೇ ಸಮಸ್ಯೆಗೆ ಕಾರಣವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದ ಹೊರಭಾಗದಲ್ಲಿ ಕೊರೆದ ಕೊಳವೆ ಬಾವಿಯ ನೀರನ್ನು ಬಳಸಿಕೊಳ್ಳದೆ ಈಚೆಗೆ ಬೇರೆ ಸ್ಥಳದಲ್ಲಿ ಇನ್ನೊಂದು ಕೊಳವೆ ಬಾವಿ ಕೊರೆದು ಹಣ ಪೋಲು ಮಾಡಲಾಗಿದೆ.
ಹಣ ಖರ್ಚಾದರೂ ಪರವಾಗಿಲ್ಲ ಆದರೆ ಅದಕ್ಕೆ ನೀರು ಹತ್ತಲಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ಶೀಘ್ರ ಸಾಕಷ್ಟು ನೀರಿರುವ ಕೊಳವೆಬಾವಿಯಿಂದ ಪೈಪಲೈನ್ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.