ಬಸವಕಲ್ಯಾಣ: ತಾಲ್ಲೂಕಿನಲ್ಲಿನ ಅನೇಕ ರಸ್ತೆಗಳು ತೀರ ಹದಗೆಟ್ಟಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆದ್ದರಿಂದ ಶೀಘ್ರ ಇಂಥ ರಸ್ತೆಗಳ ದುರುಸ್ತಿ ಕಾರ್ಯ ನಡೆಸಬೇಕು ಎಂದು ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಸಂಬಂಧಿತರಿಗೆ ಒತ್ತಾಯಿಸಿದ್ದಾರೆ.
ತಾಲ್ಲೂಕಿನಲ್ಲಿ ಎಲ್ಲಿ ಹೊದರೂ ರಸ್ತೆಗಳ ಡಾಂಬರು ಕಿತ್ತುಕೊಂಡು ತಗ್ಗುಗಳು ಬಿದ್ದಿರುವುದು ಕಾಣುತ್ತದೆ. ಇಂಥಲ್ಲಿ ಬಸ್ನಲ್ಲಿ ಅಥವಾ ಇತರೆ ವಾಹನಗಳಲ್ಲಿ ಸಂಚರಿಸಿದರೆ ಮೈಯೆಲ್ಲ ನುಗ್ಗಾಗುತ್ತದೆ. ಕೆಲವೆಡೆ ಕಚ್ಚಾ ರಸ್ತೆಗಳಿದ್ದರೂ ಸಂಬಂಧಿತರು ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಮುಖ್ಯವಾಗಿ ಮುಚಳಂಬ -ಭಾಲ್ಕಿ ರಸ್ತೆಯು ಗೋರಟಾ ಮತ್ತು ಹೊನ್ನಳ್ಳಿ ಹತ್ತಿರ ತೀರ ಕೆಟ್ಟಿದೆ. ಈ ರಸ್ತೆ ಬಸವಕಲ್ಯಾಣದಿಂದ ಭಾಲ್ಕಿ ಮತ್ತು ಬೀದರಗೆ ಹೋಗಲು ಅನುಕೂಲ ಆಗಿದೆ. ಆದ್ದರಿಂದ ಇಲ್ಲಿಂದ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಈ ರಸ್ತೆ ವಾಹನ ಸಂಚಾರಕ್ಕೆ ಅಷ್ಟೇಅಲ್ಲ; ಮನುಷ್ಯರಿಗೆ ಮತ್ತು ದನಕರುಗಳಿಗೆ ಹೋಗಲು ಸಹ ಅಯೋಗ್ಯವಾಗಿದೆ. ನಡೆದುಕೊಂಡು ಹೋದರೂ ಎಡವಿ ಬೀಳುವುದು ಖಚಿತ ಎನ್ನುವಂತಾಗಿದೆ.
ಇಲ್ಲಾಳದಿಂದ ಜಾಪೂರವಾಡಿಗೆ ಹೋಗುವುದಕ್ಕೆ ಕಚ್ಚಾ ರಸ್ತೆ ಇರುವುದರಿಂದ ಮಳೆ ಬಂದಾಗ ಕೆಸರಿನಿಂದ ತುಂಬಿರುತ್ತದೆ. ಬಿಸಿಲಿದ್ದಾಗ ಧೂಳು ಮೈಮೇಲೆ ಬರುತ್ತದೆ. ಎಲ್ಲೆಡೆ ಡಾಂಬರು ರಸ್ತೆಗಳಿರುವಾಗ ಇಲ್ಲಿ ಇನ್ನುವರೆಗೆ ಕಚ್ಚಾ ರಸ್ತೆ ಇರುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಹೋಬಳಿ ಕೇಂದ್ರವಾದ ಹುಲಸೂರದಿಂದ ಹಾಲಹಳ್ಳಿಗೆ ಹೋಗುವ ರಸ್ತೆ, ಧನ್ನೂರದಿಂದ ಕಾದೇಪುರಕ್ಕೆ ಹೋಗುವ ರಸ್ತೆ ಮತ್ತು ಮುಡಬಿ- ಕಿಣ್ಣಿವಾಡಿ, ರಾಷ್ಟ್ರೀಯ ಹೆದ್ದಾರಿಯಿಂದ ಉಮಾಪುರಕ್ಕೆ ಹೋಗುವ ರಸ್ತೆಗಳು ಸಹ ತೀರ ಹದಗೆಟ್ಟಿವೆ. ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳು ಹಾಳಾಗಿದ್ದು ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಇನ್ನುಮುಂದೆ ರಸ್ತೆ ಸುಧಾರಣೆಗೆ ವಿಳಂಬ ಮಾಡಿದರೆ ಯುವ ಕಾಂಗ್ರೆಸ್ದಿಂದ ರಸ್ತೆತಡೆ ಮತ್ತು ತಹಸೀಲ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಆನಂದ ದೇವಪ್ಪ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.