ಬಸವಕಲ್ಯಾಣ: ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಕೊಟ್ಟು ಸಮಾಜಮುಖಿಯಾಗಿ ಚಿಂತಿಸಿ ವಚನ ಸಾಹಿತ್ಯದ ಭಂಡಾರವನ್ನು ಸೃಷ್ಟಿಸಿದ್ದಾರೆ. ಅವುಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯದಂಥ ಉನ್ನತ ಸಂಸ್ಥೆಯ ಅಗತ್ಯವಿದೆ ಎಂದು ಗುಲ್ಬರ್ಗ ವಿಶ್ವವಿದಾ್ಯಲಯದ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಇಲ್ಲಿ ಸ್ಥಾಪಿಸುತ್ತಿರುವ ‘ವಚನ ವಿಶ್ವವಿದ್ಯಾಲಯ’ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂಥ ಸಂಸ್ಥೆ ಕಟ್ಟಲು ದೂರದೃಷ್ಟಿ ಬೇಕು. 100 ರಿಂದ 1 ಸಾವಿರ ಎಕರೆಯಷ್ಟು ಜಾಗದ ಅವಶ್ಯಕತೆ ಇದೆ. ತಜ್ಞರ ಸಮಿತಿ ನೇಮಿಸಿ ರೂಪುರೇಷೆ ಸಿದ್ಧಪಡಿಸಬೇಕು. ಕೇಂದ್ರ ಇಲ್ಲವೆ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆಯಬೇಕು. ಖಾಸಗಿಯಾಗಿಯೂ ಡೀಮ್ಡ್ ವಿಶ್ವವಿದಾ್ಯಲಯ ಆರಂಭಿಸಬಹುದು ಎಂದರು.
ವಚನಾಧ್ಯಯನದ ಜತೆಗೆ ಉದ್ಯೋಗಾಧಾರಿತ ಕೋರ್ಸ್ಗಳನ್ನು ಆರಂಭಿಸಿದರೆ ವಚನ ವಿಶ್ವವಿದ್ಯಾಲಯ ಹೆಚ್ಚಿನವರನ್ನು ಆಕರ್ಷಿಸಬಹುದು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರ ತೀವ್ರ ಇಚ್ಛಾಶಕ್ತಿ ಮತ್ತು ಬಸವಭಕ್ತರ ಸಹಾಯ ಸಹಕಾರ ಇರುವುದರಿಂದ ಈ ವಿಶ್ವವಿದ್ಯಾಲಯದ ಸ್ಥಾಪನೆ ಸುಗಮಗೊಳ್ಳಲಿದೆ ಎಂಬ ಭಾವನೆ ನನ್ನದಾಗಿದೆ ಎಂದು ಹೇಳಿದರು.
ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ , 12 ನೇ ಶತಮಾನದ ನಂತರ ವಚನಗಳ ಸಂಪರ್ಕ ಕಡಿದಿದ್ದರಿಂದಲೇ ವೈದಿಕ ಸಂಸ್ಕೃತಿ ವಿಜೃಂಭಿಸುವಂತಾಯಿತು. ಇದಲ್ಲದೆ ಲಿಂಗಾಯಿತ ಮಠಗಳಲ್ಲಿ ಇಂಥ ಪದ್ಧತಿಯಲ್ಲಿಯೇ ಶಿಕ್ಷಣ ದೊರೆಯುತ್ತಿದೆ. ಆದ್ದರಿಂದ ಶರಣ ಸಂಸ್ಕೃತಿ ಕಲಿಸುವುದಕ್ಕಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ 16 ಎಕರೆ ಜಾಗ ಖರೀದಿಸಿದ್ದೇವೆ ಎಂದು ತಿಳಿಸಿದರು.
ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ ವಿಶ್ವವಿದ್ಯಾಲಯಕ್ಕೆ ಬಸವತತ್ವ ಅರಿತಿರುವ ದಲಿತ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಿಸಿದರೆ ಬಸವಣ್ಣನವರ ಆಶಯ ಈಡೇರಿದಂತಾಗುತ್ತದೆ ಎಂದರು. ತಜ್ಞರ ಸಮಿತಿ ಹೊರತುಪಡಿಸಿ ಅನ್ಯ ಸಮಿತಿ ರಚಿಸಿದರೆ ಸಂಸ್ಥೆ ಬೆಳವಣಿಗೆಗೆ ಸ್ವಹಿತಾಸಕ್ತಿಗಳು ಅಡ್ಡಬರುತ್ತವೆ. ಸಂಸ್ಥೆಯನ್ನು ಭಾಲ್ಕಿ ಮಠದ ಅಡಿಯಲ್ಲಿಯೇ ನಡೆಸುವುದು ಸೂಕ್ತ ಎಂದರು.
ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ ಸಂಶೋಧನೆ ಮತ್ತು ಚರಿತ್ರೆಯ ಪರಿಷ್ಕರಣೆ ಕೈಗೊಳ್ಳಬೇಕು. ಶಿವಯೋಗದ ತರಬೇತಿ ಕೊಡಬೇಕು ಎಂದರು.
ವಿ.ಸಿದ್ಧರಾಮಣ್ಣ, ಬೀದರನ ಅಕ್ಕ ಅನ್ನಪೂರ್ಣ, ವಿಭೂತಿ ಬಸವಾನಂದರು, ಹಿರಿಯ ಸಾಹಿತಿಗಳಾದ ವೀರೇಂದ್ರ ಸಿಂಪಿ, ಎಂ.ಜಿ.ಗಂಗನಪಳ್ಳಿ, ದೇಶಾಂಶ ಹುಡಗಿ, ಹಣಮಂತರಾವ ಪಾಟೀಲ, ಪಂಚಾಕ್ಷರಿ ಪುಣ್ಯಶೆಟ್ಟಿ, ಶಂಭುಲಿಂಗ ಕಾಮಣ್ಣ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಶಪ್ಪ ಬಾಲಿಕಿಲೆ, ಪಂಚಾಕ್ಷರಿ ಹಿರೇಮಠ ಡಾ.ಸೋಮನಾಥ ಯಾಳವಾರ, ಶಿವರಾಜ ಕನಶೆಟ್ಟಿ, ಡಾ.ಬಸವರಾಜ ಬಲ್ಲೂರ, ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಸಲಹೆ ನೀಡಿದರು. ಭಾರತೀಯ ಬಸವಬಳಗದ ಜಿಲ್ಲಾಧ್ಯಕ್ಷ ಬಾಬು ವಾಲಿ ಸ್ವಾಗತಿಸಿದರು. ಉಪನ್ಯಾಸಕ ಂದ್ರಕಾಂತ ಬಿರಾದಾರ ನಿರೂಪಿಸಿದರು.
ದೇಣಿಗೆ: ಮಡಿವಾಳಯ್ಯ ವಿಶ್ವವಿದ್ಯಾಲಯದ ಕಾರ್ಯಕ್ಕಾಗಿ 25 ಸಾವಿರ ರೂಪಾಯಿಯ ಚೆಕ್ ಅನ್ನು ಮತ್ತು ವಿಭೂತಿ ಬಸವಾನಂದರು 5 ಸಾವಿರ ನಗದು ದೇಣಿಗೆ ಸಲ್ಲಿಸಿದರು. ಭಾಲ್ಕಿ ಉಪನ್ಯಾಸಕಿ ಮಲ್ಲಮ್ಮ ಪಾಟೀಲ ತಮ್ಮ ಮಗನ ಮೊದಲ ಸಂಬಳ ದೇಣಿಗೆಯಾಗಿ ಕೊಡುವುದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.