ADVERTISEMENT

ಬೀದರ್ ಅಭಿವೃದ್ಧಿ ವೇಗ: ಸಂತಸ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 9:10 IST
Last Updated 3 ನವೆಂಬರ್ 2012, 9:10 IST

ಬೀದರ್: ಬೀದರ್ ಜಿಲ್ಲೆಯ ಅಭಿವೃದ್ಧಿ ವೇಗದ ಬಗೆಗೆ ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣದಲ್ಲಿ 108 ಅಡಿಯ ಬಸವೇಶ್ವರ ಪುತ್ಥಳಿ ನಿರ್ಮಿಸಿದ ಹಿನ್ನೆಲೆಯಲ್ಲಿ ನಗರದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸವಕಲ್ಯಾಣ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಬೇಕು ಎಂಬ ಆಶಯ ತಮ್ಮದು. ಅಡ್ಡಿ, ಆತಂಕ ಎದುರಾದರೂ ಬಸವಭಕ್ತರ ಸಹಕಾರದೊಂದಿಗೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಬಸವಕಲ್ಯಾಣದಲ್ಲಿ ಭೂಮಿ ಖರೀದಿ ಮಾಡಿದಾಗಿನಿಂದ ಈವರೆಗೆ ಕೆಲವರು ಕಿರುಕುಳ ನೀಡುತ್ತಲೇ ಇದ್ದಾರೆ. ಆದರೆ, ಬಸವಭಕ್ತರ ಸಹಕಾರದಿಂದ 108 ಅಡಿಯ ಬಸವೇಶ್ವರ ಪುತ್ಥಳಿ ನಿರ್ಮಾಣ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಬಸವಕಲ್ಯಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುವತ್ತ ಹೆಜ್ಜೆ ಇರಿಸಲಾಗುವುದು ಎಂದರು.

108 ಅಡಿಯ ಬಸವೇಶ್ವರ ಪುತ್ಥಳಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ್  ಪಾಟೀಲ್ ಅಭಿಪ್ರಾಯಪಟ್ಟರು. ಚೆನ್ನಬಸವಾನಂದ ಸ್ವಾಮೀಜಿ, ಮಾತೆ ನಿಶ್ಚಲಾಂಬ ನೇತೃತ್ವ ವಹಿಸಿದ್ದರು. ಗುರುನಾನಕ ಪ್ರಬಂಧಕ ಸಮಿತಿಯ ದರ್ಬಾರಾಸಿಂಗ್ ಉದ್ಘಾಟಿಸಿದರು.

ಬಿ.ಎಸ್.ಎಸ್.ಕೆ. ನಿರ್ದೇಶಕ ಅಶೋಕ್ ತಮಾಸಂಗೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮನಾಥ ಪಾಟೀಲ್, ಇಂದುಧರ ಮಂಗಲಗಿ ಇದ್ದರು. ಕಂಟೆಪ್ಪ ಗಂಧಿಗುಡಿ ವಚನ ಸಂಗೀತ ನಡೆಸಿಕೊಟ್ಟರು. ಪ್ರತಿಷ್ಠಾನದ ಉಪಾಧ್ಯಕ್ಷ ಹಾವಶೆಟ್ಟಿ ಪಾಟೀಲ್ ಸ್ವಾಗತಿಸಿದರು. ಗೌರವಾಧ್ಯಕ್ಷ ಪಂಡಿತ ಬಾಳೂರೆ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಮೂಲಗೆ ನಿರೂಪಿಸಿದರು. ಮನೋಜಕುಮಾರ್ ಬುಕ್ಕಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.