ADVERTISEMENT

ಭಕ್ತರಿಂದ ತುಳಜಾಪುರಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:40 IST
Last Updated 8 ಅಕ್ಟೋಬರ್ 2011, 9:40 IST

ಬಸವಕಲ್ಯಾಣ: ಇಲ್ಲಿಗೆ ಸಮೀಪದಲ್ಲಿರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಲಕ್ಷಾಂತರ ಜನರ ಆರಾಧ್ಯದೈವವಾದ ಮಹಾರಾಷ್ಟ್ರದ ತುಳಜಾಪುರದ ತುಳಜಾಭವಾನಿ ದೇವಸ್ಥಾನಕ್ಕೆ ಶುಕ್ರವಾರ ಇಲ್ಲಿಂದ ಅನೇಕ ಭಕ್ತರು ಪಾದಯಾತ್ರೆ ಕೈಗೊಂಡರು.

ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದಸರಾ ಅಂಗವಾಗಿ ಹದಿನೈದು ದಿನಗಳವರೆಗೆ ಜಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಪ್ರತಿದಿನ ನಿತ್ಯೋಪಚಾರ ಪೂಜೆ ಮತ್ತು ರಾತ್ರಿ ಛಬಿನಾ ಮೆರವಣಿಗೆ ನಡೆಯ್ತುತದೆ.

ದಿನಕ್ಕೊಂದರಂತೆ ಅಲಂಕಾರ ಮಾಡಿ ರಥಾಲಂಕಾರ ಮಹಾಪೂಜೆ, ಮುರಲಿ ಅಲಂಕಾರ ಮಹಾಪೂಜೆ, ಶೇಷಶಾಹಿ ಅಲಂಕಾರ ಮಹಾಪೂಜೆ, ಭವಾನಿ ತಲವಾರ ಅಲಂಕಾರ ಮಹಾಪೂಜೆ, ಮಹಿಷಾಸುರ ಮರ್ದಿನಿ ಅಲಂಕಾರ ಮಹಾಪೂಜೆ ನಡೆಸಲಾಗುತ್ತದೆ.

ಆದ್ದರಿಂದ ಘಟಸ್ಥಾಪನೆಯ ದಿನದಿಂದ ಕೆಲ ಭಕ್ತರು ತುಳಜಾಪುರಕ್ಕೆ ಹೋಗುತ್ತಾರಾದರೂ ವಿಜಯದಶಮಿಯ ಮರುದಿನದಿಂದ ಕಾಲ್ನಡಿಗೆಯಲ್ಲಿ ಹೋಗುವವರ ಸಂಖ್ಯೆ ಹೆಚ್ಚುತ್ತದೆ.

ತಮ್ಮ ಗ್ರಾಮಗಳಲ್ಲಿ ಮಹಾನವಮಿಯ ಆಯುಧಪೂಜೆ ಮತ್ತು ವಿಜಯದಶಮಿ ಆಚರಿಸಿಕೊಂಡು ಪಾದಯಾತ್ರೆ ಆರಂಭಿಸುವ ಜನರು ಹುಣ್ಣಿಮೆವರೆಗೆ ಅಲ್ಲಿಗೆ ತಲುಪುತ್ತಾರೆ.

ಆದ್ದರಿಂದ ಇಂದು ಸಸ್ತಾಪುರ ಬಂಗ್ಲಾದಿಂದ ಹಾದು ಹೋಗುವ 9 ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಹುಲಸೂರದಿಂದ ಹೋಗುವ ಲಾತೂರ ಮಾರ್ಗದಲ್ಲಿ ಜನವೋ ಜನ ಕಂಡುಬಂದರು. ಇವರಿಗಾಗಿ ಅಲ್ಲಲ್ಲಿ ದಾನಿಗಳು ಉಚಿತ ಪ್ರಸಾದದ ವ್ಯವಸ್ಥೆ ಮಾಡಿದ್ದರಿಂದ ಅಂಥ ಸ್ಥಳಗಳಲ್ಲಿಯೂ ಜನಜಂಗುಳಿ ಕಂಡುಬಂತು.

ಕೃಷಿಕರ ಹಿತಕ್ಕಾಗಿ: ತಾವು ಕೃಷಿಕರ ಹಿತಬಯಸಿ ಪಾದಯಾತ್ರೆ ಕೈಗೊಂಡಿರುವುದಾಗಿ ಬಸವಕಲ್ಯಾಣದ ಎಪಿಎಂಸಿ ಅಧ್ಯಕ್ಷರು ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾದ ಪ್ರಕಾಶ ಮೆಂಡೋಳೆ ಹೇಳಿದ್ದಾರೆ.

ಅವರು ತಾಲ್ಲೂಕಿನ ಬೇಲೂರ ಗ್ರಾಮದಿಂದ ಸುಮಾರು 40 ಜನ ಭಕ್ತರೊಂದಿಗೆ ಶುಕ್ರವಾರ ತುಳಜಾಪುರಕ್ಕೆ ಪಾದಯಾತ್ರೆ ಹೊರಟರು. ಅವರೊಂದಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಂಡಿತ ಉದಾನೆ, ವೀರಶೆಟ್ಟಿ ಸಜ್ಜನಶೆಟ್ಟಿ, ಓಂಕಾರ ವೀರಣ್ಣ, ಹುಲೆಪ್ಪ ದುರ್ಗೆ ಸಹ ಪಾದಯಾತ್ರೆ ಕೈಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.