ADVERTISEMENT

ಭಾರಿ ವಾಹನ ನಿಷೇಧಿಸಿ; ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:20 IST
Last Updated 3 ಫೆಬ್ರುವರಿ 2011, 8:20 IST

ಬಸವಕಲ್ಯಾಣ: ಇಲ್ಲಿನ ಅಂಬೇಡ್ಕರ ವೃತ್ತದಲ್ಲಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರನೊಬ್ಬನಿಗೆ ಗಾಯವಾಗಿದ್ದರಿಂದ ಜನತೆ ರೋಷಗೊಂಡು ದಿಢೀರ ರಸ್ತೆ ತಡೆ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು.

ಶ್ರೀಮಂತ ವೀರಭದ್ರಪ್ಪ ಎನ್ನುವವರು ಬೈಕ್ ಮೇಲೆ ಹೋಗುತ್ತಿದ್ದಾಗ ಹಿಂಭಾಗದಿಂದ ಧಾವಿಸಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ಕಾರಣ ಅವರ ಕಾಲಿಗೆ ಗಾಯವಾಗಿದ್ದು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಇದನ್ನು ಕಂಡ ಜನರು ತಕ್ಷಣ ರಸ್ತೆತಡೆ ನಡೆಸಿದರು. ನಗರದಲ್ಲಿ ಭಾರಿ ವಾಹನಗಳ ಪ್ರವೇಶ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಸಿಡಿಪಿಒ ಕಚೇರಿ ರಸ್ತೆಯಲ್ಲಿನ ಗ್ಯಾರೇಜುಗಳಿಗೆ ಲಾರಿಗಳು ಹೋಗಬೇಕಾದರೆ ಅಂಬೇಡ್ಕರ ವೃತ್ತದಲ್ಲಿನ ಇಕ್ಕಟ್ಟಾದ ರಸ್ತೆಯಿಂದ ಹೋಗಬೇಕಾಗುತ್ತದೆ. ಅಲ್ಲದೆ ಈ ರಸ್ತೆಗೆ ಪ್ರವೇಶಿಸುವಾಗ ರಸ್ತೆ ಸ್ವಲ್ಪ   ಎತ್ತರವಾಗಿದ್ದು  ಇದನ್ನು ಏರಲು ಸಮಯ ಬೇಕಾಗಿದ್ದರಿಂದ  ಮುಖ್ಯರಸ್ತೆಯಲ್ಲಿ ಆಚೀಚೆ ಹಲವಾರು   ವಾಹನಗಳು ಕೆಲಕಾಲ ನಿಲ್ಲಬೇಕಾಗುತ್ತದೆ.

ಈ ಭಾಗದಲ್ಲಿ, ಲಾರಿಗಳನ್ನು ಗ್ಯಾರೇಜುಗಳಿಗೆ ತೆಗೆದುಕೊಂಡು ಹೋಗಲು ಹೆಚ್ಚಾಗಿ ಕ್ಲಿನರ್‌ಗಳು ಹಾಗೂ ಹುಡುಗರು ಲಾರಿ ಚಾಲನೆ ಮಾಡುತ್ತಾರೆ. ಆದ್ದರಿಂದ ಒಂದೊಂದು ಸಲ ಅಂಬೇಡ್ಕರ ವೃತ್ತದಲ್ಲಿನ ತಿರುವಿನಲ್ಲಿನ ಎತ್ತರದ ರಸ್ತೆ ಏರುವಾಗ ಲಾರಿಗಳು ಹಿಂದಕ್ಕೆ ಬರುತ್ತವೆ. ಹೀಗಾಗಿ ಬೇರೆಯವರಿಗೆ ತೊಂದರೆ ಆಗುತ್ತಿದೆ. ಇಲ್ಲಿಂದ ವಾಹನ ಸಂಚಾರ ನಿಷೇಧಿಸಬೇಕು ಎಂದು ಹಲವಾರು ಸಲ ಕೇಳಿಕೊಂಡರೂ ಏನೂ ಪ್ರಯೋಜನ ಆಗಿಲ್ಲ ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ದೂರಿದರು.

ರಸ್ತೆತಡೆ ನಡೆಸಿದ್ದರಿಂದ ಕೆಲಕಾಲ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ನಿಂತಿದ್ದವು. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.