ಭಾಲ್ಕಿ: ಶಾಲೆಗಳಲ್ಲಿ ಓದುವ ಮಕ್ಕಳ ಬಿಸಿ ಊಟದ ಅನ್ನವನ್ನು ಯಾರೂ ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು. ಊಟದಲ್ಲಿ ಗುಣಮಟ್ಟ ಕಾಯ್ದುಕೊಂಡು ಸ್ವಚ್ಛ ವಾತಾವರಣದಲ್ಲಿ ಪ್ರೀತಿಯಿಂದ ಉಣ ಬಡಿಸಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ಜಿಲ್ಲಾ ಮಟ್ಟದ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಚಂದ್ರಶೇಖರ ಅಭಿಪ್ರಾಯಪಟ್ಟರು.
ಭಾಲ್ಕಿಯ ಬಿಆರ್ಸಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಇಲಾಖೆಯ ಎಲ್ಲ ಹಂತದ ಅನುಷ್ಠಾನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಒಂದು ಸಣ್ಣ ಉಡಾಫೆಯೂ ಬಹು ದೊಡ್ಡ ದುರಂತಕ್ಕೆ ಕಾರಣವಾಗಬಲ್ಲದು ಎಂಬುದು ಬಿಹಾರದಲ್ಲಿ ಬಿಸಿ ಊಟ ಸೇವಿಸಿದ 23 ಮಕ್ಕಳ ಮಾರಣಹೋಮವಾಗಿದ್ದನ್ನು ಉದಾಹರಿಸಿದರು.
ಪ್ರತಿಯೊಂದು ಶಾಲೆಯಲ್ಲಿ ಆ.1ರಿಂದ ಹಾಲು ವಿತರಣೆಯೂ ಜಾರಿಗೆ ಬರಲಿದೆ. ಅದರ ಜೊತೆಗೆ ಮಕ್ಕಳ ಪೌಷ್ಟಿಕಾಂಶ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯಿಂದ 4 ಪ್ರಕಾರದ ಮಾತ್ರೆಗಳನ್ನು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ ಹುನಗುಂದ ಮಾತನಾಡಿ, ರುಚಿಯಾದ ಮತ್ತು ಶುಚಿಯಾದ ಅಡುಗೆ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯವನ್ನು ಇಲಾಖೆಯಿಂದ ಶಾಲೆಗೆ ಕೊಟ್ಟರೂ ಮುಖ್ಯಗುರುಗಳ ಆಸಕ್ತಿಯ ಕೊರತೆಯಿಂದ ಕೆಲವೆಡೆ ಬಿಸಿಊಟದಲ್ಲಿ ಗುಣಮಟ್ಟವಿಲ್ಲದಂತಾಗಿದ್ದು ಕಳವಳಕಾರಿ ಸಂಗತಿ.
ಅಂಥ ಕಡೆ ಕೆಳ ಹಂತದ ನೋಡಲ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ನಿಖರ ವರದಿ ನೀಡುವಂತೆ ತಿಳಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಬಿ. ಗೋಖಲೆ ನಿರ್ವಹಿಸಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪ್ರಕಾಶ ಡೋಂಗ್ರೆ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಜಗನ್ನಾಥ ಭಂಡೆ ವಂದಿಸಿದರು.
ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಹಲ್ಮಂಡಗೆ, ಮಾರುತಿರಾವ ವಾಘೆ, ಬಸವರಾಜ ಚನಶೆಟ್ಟೆ, ಶಿವಕಾಂತ, ರಾಜಕುಮಾರ ಸಾಲೀಮಠ, ಉದಯಕುಮಾರ, ವಿವಿಧ ಸಿಆರ್ಪಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.