ಔರಾದ್: ತೊಗರಿ ಖರೀದಿ ವಿಷಯದಲ್ಲಿ ಸರ್ಕಾರ ರೈತರ ಜೊತೆ ಚಲ್ಲಾಟ ಆಡುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ 12ರಂದು ಇಲ್ಲಿ ಮೂರನೇ ಬಾರಿ ಆರಂಭವಾದ ತೊಗರಿ ಖರೀದಿ ಕೇಂದ್ರಕ್ಕೆ ನಾಲ್ಕೇ ದಿನ ಬೀಗ ಬಿದ್ದಿದೆ.
ಖರೀದಿ ಆರಂಭವಾದ ಸುದ್ದಿ ತಿಳಿದ ರೈತರು ತಮ್ಮ ತೊಗರಿ ಮೂಟೆಗಳು ಕೇಂದ್ರದ ಎದುರು ತಂದು ಹಾಕಿದ್ದಾರೆ. ಆದರೆ ಮಂಡಳಿಯವರು ಏಕಾ ಏಕಿ ಖರೀದಿ ಸ್ಥಗಿತಗೊಳಿಸಿದ್ದು, ನಮ್ಮ ತೊಗರಿ ಎಲ್ಲಿಗೆ ಕೊಂಡೊಯ್ಯಬೇಕು ಎಂದು ಬಲ್ಲೂರ ಗ್ರಾಮದ ರೈತ ಬಾಬುರಾವ ಚಲ್ಲಾಳೆ ಅಳಲು ತೋಡಿಕೊಂಡಿದ್ದಾರೆ.
ನಾನು ಕಳೆದ 16ರಂದು ಇಲ್ಲಿ 300 ಚೀಲ ತೊಗರಿ ತಂದು ಹಾಕಿ ಕಾಯುತ್ತ ಕುಳಿತಿದ್ದೇನೆ. ಆದರೆ ಇಲ್ಲಿಯ ತನಕ ಖರೀದಿ ಮಾಡುವವರು ಬಂದಿಲ್ಲ ಎಂದು ಅಲವತ್ತುಕೊಂಡರು. ಇಂಥ ಅನೇಕ ರೈತರು ತಮ್ಮ ತೊಗರಿ ಮೂಟೆ ಜೊತೆಗೆ ಖರೀದಿ ಕೇಂದ್ರದ ಎದುರು ಠಿಕಾಣಿ ಹೂಡಿದ್ದಾರೆ. ಖರೀದಿ ಮಾಡುವ ತನಕ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶಾಸಕರ ಭರವಸೆ: ಶಾಸಕ ಪ್ರಭು ಚವ್ಹಾಣ್ ಗುರುವಾರ ಇಲ್ಲಿಯ ಎಪಿಎಂಸಿಗೆ ಭೇಟಿ ನೀಡಿ ತೊಗರಿ ಮಂಡಳಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಸರ್ಕಾರ ನೀಡಿದ ಆದೇಶದ ಪ್ರಕಾರ ನಾವು ಕಳೆದ 16 ವರೆಗೆ ಖರೀದಿ ಮಾಡಿದ್ದೇವೆ. ಇನ್ನು ಮುಂದೆ ಖರೀದಿಸಬೇಕಾದರೆ ಸರ್ಕಾರದ ಅನುಮತಿ ಬೇಕಾಗುತ್ತದೆ ಎಂದು ಮಂಡಳಿ ಅಧಿಕಾರಿಗಳು ಹೇಳಿದರು.
ಈ ಬಗ್ಗೆ ನಾನು ಮುಖ್ಯಮಂತ್ರಿ ಮತ್ತು ಮಂಡಳಿ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮತ್ತೆ ನಾಳೆ ಇಲ್ಲ ನಾಡಿದ್ದು ಖರೀದಿಗೆ ಅನುಮತಿ ಸಿಗಲಿದೆ ಎಂದು ಶಾಸಕರು ಅಲ್ಲಿದ್ದ ರೈತರಿಗೆ ಭರವಸೆ ನೀಡಿದರು.
ಚೆಕ್ ವಿತರಣೆ: ಇದೇ ವೇಳೆ ಶಾಸಕರು ತೊಗರಿ ಮಾರಾಟ ಮಾಡಿದ ರೈತರಿಗೆ ಮಂಡಳಿ ವತಿಯಿಂದ ಚೆಕ್ ವಿತರಿಸಿದರು. ತಾಲ್ಲೂಕಿನಲ್ಲಿ ಇಲ್ಲಿಯ ತನಕ 18 ಸಾವಿರ ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ.
ಆ ಎಲ್ಲ ರೈತರಿಗೂ ಚೆಕ್ ಮೂಲಕ ಹಣ ನೀಡಲಾಗುತ್ತಿದೆ ಎಂದು ಖರೀದಿ ಕೇಂದ್ರದ ಮುಖ್ಯಸ್ಥ ಜಿತೇಂದ್ರ ತಿಳಿಸಿದರು. ಎಪಿಎಂಸಿ ಅಧ್ಯಕ್ಷ ವೆಂಕಟರಾವ ಡೊಂಬಾಳೆ, ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಸಚಿನ್ ರಾಠೋಡ, ಚೆನ್ನಬಸಪ್ಪ, ರವೀಂದ್ರ ಮೀಸೆ, ರವಿ ರಾಠೋಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.