ADVERTISEMENT

ಮಳೆ ಕೊರತೆ-ಬಿತ್ತನೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:37 IST
Last Updated 20 ಜೂನ್ 2013, 10:37 IST

ಔರಾದ್: ದೇಶದ ಉತ್ತರ ಭಾರತ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಆರ್ಭಟ ಜಾಸ್ತಿಯಾಗಿ ಜಲ ಪ್ರಳಯವಾಗುತ್ತಿದ್ದರೆ ಇಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗುತ್ತಿದೆ.

ಜೂನ್ ತಿಂಗಳಲ್ಲಿ ಸರಾಸರಿ 142 ಎಂ.ಎಂ. ಮಳೆಯಾಗಬೇಕು. ಆದರೆ ಜೂನ್ 19ರ ವರೆಗೆ ಕೇವಲ 54 ಎಂ.ಎಂ. ಮಾತ್ರ ಮಳೆಯಾಗಿದೆ. ಔರಾದ್-49 ಎಂ.ಎಂ, ಚಿಂತಾಕಿ-63 ಎಂ.ಎಂ, ಸಂತಪುರ-77 ಎಂ.ಎಂ, ಠಾಣಾಕುಶನೂರ-95 ಎಂ.ಎಂ, ಕಮಲನಗರ-25 ಎಂ.ಎಂ, ದಾಬಕಾ ಹೋಬಳಿಯಲ್ಲಿ 17 ಎಂ.ಎಂ. ಮಳೆಯಾಗಿದೆ.

ಚಿಂತಾಕಿ, ಸಂತಪುರ ಹೊರತುಪಡಿಸಿದರೆ ಇತರೆ ಹೋಬಳಿಯಲ್ಲಿ ಶೇ 20ರಷ್ಟು ಬಿತ್ತನೆಯಾಗಿಲ್ಲ. ರೈತರು ಹೊಲ ಹದ ಮಾಡಿ ಬೀಜ ಗೊಬ್ಬರ ಸಂಗ್ರಹಿಸಿಟ್ಟುಕೊಂಡು ಮಳೆರಾಯನ ದಾರಿ ಕಾಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 80,600 ಹೆಕ್ಟೇರ್ ಬಿತ್ತನೆ ಪ್ರದೇಶವಾಗಿದೆ. ಈ ಪೈಕಿ 1,700 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತಲಾಗುತ್ತದೆ. ಈಗಾಗಲೇ ಅರ್ಧದಷ್ಟು ರೈತರು ಬೀಜ ಕೊಂಡಿದ್ದಾರೆ. ಮಳೆ ಕೊರತೆಯಿಂದ ರೈತರು ಬೀಜ ಪಡೆಯಲು ಅವಸರ ಮಾಡದೆ ನಿಧಾನವಾಗಿ ಕೊಂಡೊಯ್ಯುತ್ತಿದ್ದಾರೆ.

ಉದ್ದು, ಹೆಸರು, ಸೋಯಾ ಬಿತ್ತನೆಗೆ ಈಗ ಸೂಕ್ತ ಕಾಲವಾಗಿದೆ. ಆದರೆ ಮಳೆ ಇಲ್ಲದ ಕಾರಣ ರೈತರು ಕೈಕಟ್ಟಿ ಕುಳಿತಿದ್ದಾರೆ. ಸೋಯಾ ಬಿತ್ತಲು ಇನ್ನು ಕಾಲಾವಕಾಶ ಇದ್ದರೂ ವಿಳಂಬವಾದರೆ ರೋಗ ಬರುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳ ಹೇಳಿಕೆಯಾಗಿದೆ.

ಕುಡಿಯುವ ನೀರಿಗೂ ಸಮಸ್ಯೆ: ಮಳೆ ಮುಂದೆ ಹೋದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯಾಗದ ಕಾರಣ ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಬಾರದೆ ಗ್ರಾಮೀಣ ಪ್ರದೇಶದ ಜನ ತೊಂದರೆ ಎದುರಿಸಬೇಕಾಗಿದೆ. ಕಳೆದ ಎರಡು ವಾರಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಜನರ ಬದುಕು ಅಸ್ತವ್ಯಸ್ಥವಾಗಿದೆ. ಈ ಕಾರಣ ರೈತರು ಮತ್ತು ಸಾರ್ವಜನಿಕರು ಕಳೆದ 17ರಂದು ಜೆಸ್ಕಾಂ ಕಚೇರಿ ಎದುರು ಭಾರಿ ಪ್ರದರ್ಶನ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.