ಬೀದರ್: ಮಹಿಳಾ ಸಬಲೀಕರಣದಿಂದ ಮಾತ್ರ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ರತ್ನಾ ಕುಶನೂರ ಹೇಳಿದರು.
ಭಾರತೀಯ ಕುಟುಂಬ ಯೋಜನಾ ಸಂಘ (ಎಫ್.ಪಿ.ಎ.ಐ.)ವು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.ಪ್ರಸ್ತುತ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಲಿಂಗ ತಾರತಮ್ಯ ನಿವಾರಿಸಿ ಪುರುಷ ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣುವ ಅಗತ್ಯವಿದೆ ಎಂದು ಎಫ್.ಪಿ.ಎ.ಐ. ಅಧ್ಯಕ್ಷೆ ಡಾ. ವಿಜಯಶ್ರೀ ಬಶೆಟ್ಟಿ ಅಭಿಪ್ರಾಯಪಟ್ಟರು. ಮಹಿಳೆಯರು ಶೋಷಣೆಯ ವಿರುದ್ಧ ಹೋರಾಟ ನಡೆಸಬೇಕು ಎಂದು ಕಿವಿಮಾತು ಹೇಳಿದರು.ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಖೆಯ ಉಪಾಧ್ಯಕ್ಷ ಪೂರ್ಣಿಮಾ ಜಾರ್ಜ್ ನುಡಿದರು. ಖಜಾಂಚಿ ಅಂಬುಜಾ ವಿಶ್ವಕರ್ಮ ಮಾತನಾಡಿದರು. ಶಾಖೆಯ ವ್ಯವಸ್ಥಾಪಕ ಶೇಕ್ ಮುಷ್ತಾಕ್ ಅಲಿ ಸ್ವಾಗತಿಸಿದರು.
ಸಂಘದ ಮಾಜಿ ಅಧ್ಯಕ್ಷ ಬಾಬುರಾವ ಸಿಂಧೋಲ್ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕ ವಿನಾಯಕ ಕುಲಕರ್ಣಿ ನಿರೂಪಿಸಿದರೆ ಕಾರ್ಯಕ್ರಮ ಅಧಿಕಾರಿ ಬಿ.ಬಿ. ಕೊಡ್ಲಿ ವಂದಿಸಿದರು.ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯೆಯರು ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.