ADVERTISEMENT

ರಾಜಕೀಯ ಪಕ್ಷಗಳಿಗೆ ಕನ್ನಡದ ಕಾಳಜಿ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 9:10 IST
Last Updated 1 ಮಾರ್ಚ್ 2012, 9:10 IST

ಬೀದರ್: `ರಾಷ್ಟ್ರೀಯ ಪಕ್ಷಗಳಿಗೆ ಕನ್ನಡದ ಕಾಳಜಿ ಇಲ್ಲ, ಪ್ರಾದೇಶಿಕ ಪಕ್ಷಗಳಿಗೂ ಕೂಡ ಅದು ಬೇಕಾಗಿಲ್ಲ~ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ್ (ಚಂಪಾ) ಅಭಿಪ್ರಾಯಪಟ್ಟರು.
`ರಾಜಕಾರಣಿಗಳು ಕನ್ನಡಕ್ಕೆ ಸಂಬಂಧಿಸಿದಂತೆ ಇಚ್ಛಾಶಕ್ತಿ ತೋರಿಸಿದ ಒಂದೇ ಒಂದು ಉದಾಹರಣೆ ಇಲ್ಲ.

ಹೀಗಾಗಿ ಕನ್ನಡದ ಹಿತಾಸಕ್ತಿ ಕಾಯಲು ಕನ್ನಡ ಸಾಹಿತ್ಯ ಪರಿಷತ್‌ನಂತಹ ವೇದಿಕೆ ಅನಿವಾರ್ಯ ಆಗಿದೆ.ಕನ್ನಡದ ಹಿತಕ್ಕಾಗಿ ಅನಿವಾರ್ಯವಾದರೆ ಜನಶಕ್ತಿಯನ್ನು ಸಂಘಟಿಸಿ ಹೋರಾಟ ಮಾಡುವ ಸಾಮರ್ಥ್ಯ ಸಾಹಿತ್ಯ ಪರಿಷತ್ತಿಗೆ ಇದೆ~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

 ಸಾಹಿತ್ಯ ಪರಿಷತ್ತು ಸರ್ಕಾರದಿಂದ ಅನುದಾನ ಪಡೆದರೂ ಅದು ಸರ್ಕಾರಿ ಸಂಸ್ಥೆ ಅಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಸರ್ಕಾರದ ಶಿಷ್ಟಾಚಾರಗಳು ಅದಕ್ಕೆ ಅನ್ವಯ ಆಗುವುದಿಲ್ಲ. ಹೀಗಾಗಿ ಸಮ್ಮೇಳನದ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ಕಡ್ಡಾಯ ಏನಿಲ್ಲ. ಜನಪ್ರತಿನಿಧಿಗಳಲ್ಲಿ ಇರುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವರನ್ನು ಆಹ್ವಾನಿಸುವುದರಲ್ಲಿ ತಪ್ಪೇನು ಇಲ್ಲ. ರಾಜಕಾರಣಿಗಳು ಸೇರಿದಂತೆ ಯಾರ ಬಗ್ಗೆಯೂ ಅಸ್ಪೃಶ್ಯತೆ ಆಚರಿಸುವುದಿಲ್ಲ ಎಂದು ಹೇಳಿದರು.

ಏಪ್ರಿಲ್ 29 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತಾವು ಈ ಹಿಂದಿನ ಅವಧಿಯಲ್ಲಿ ಮಾಡಿದ ಸಾಧನೆ, ಎದುರಿಸಿದ ಸವಾಲು, ತಳೆದ ನಿಲುವು ಹಾಗೂ ಅನುಭಗಳನ್ನು ಮುಂದಿಟ್ಟುಕೊಂಡು ಕೇಳಲಾಗುವುದು. ತಾವು ಆಯ್ಕೆಯಾದರೆ ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲ ವಿಚಾರಧಾರೆಗಳನ್ನು ಸಂಗಮಿಸುವ ಕೇಂದ್ರವನ್ನಾಗಿ ಮಾಡಲಾಗುವುದು. ಕನ್ನಡಪರ ಸಂಘಟನೆಗಳ ನಡುವೆ ಸೌಹಾರ್ದ ಮೂಡಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.

2014ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ಗೆ ನೂರು ವರ್ಷ ತುಂಬಲಿವೆ. ಹೀಗಾಗಿ ಮುಂಚಿತವಾಗಿಯೇ ಯೋಜನೆ ರೂಪಿಸಿ ಶತಮಾನೋತ್ಸವ ಸಮಾರಂಭವನ್ನು ಪರಿಷತ್, ಸಾಹಿತಿಗಳು ಮಾತ್ರವಲ್ಲದೇ, ಬದುಕಿಗೆ ಸಂಬಂಧಿಸಿದ ಚರ್ಚೆಯ ವೇದಿಕೆಯನ್ನಾಗಿ ಮಾಡಲಾಗುವುದು ಎಂದರು.

ಕರ್ನಾಟಕದಲ್ಲಿ ಇರುವ ಕನ್ನಡಿಗರಿಗೆ ಉದ್ಯೋಗ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಜಾರಿಗೆ ತರಲು ಅಗತ್ಯವಾದ ಹೋರಾಟ ಮಾಡಲಾಗುವುದು. ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ವೈಚಾರಿಕ ಆಯಾಮ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಲ್ಲಿಯು ಪರಿಷತ್ತಿನ ಘಟಕಗಳನ್ನು ಸ್ಥಾಪಿಸಲಾಗುವುದು. ಕುವೆಂಪು ಪ್ರತಿಪಾದಿಸಿದ ಸಾಂಸ್ಕೃತಿಕ ಕರ್ನಾಟಕದ ಪರಿಕಲ್ಪನೆಯನ್ನು ಜಾರಿಗೆ ತರಲಾಗುವುದು. ಪ್ರತಿ ಶನಿವಾರ ಸಂಜೆ ಮತ್ತೆ ಪುಸ್ತಕ ಸಂತೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.