ADVERTISEMENT

ರೈತರಿಗೆ ನೀರಾವರಿ ತರಬೇತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಭಾಲ್ಕಿ: ಕೃಷಿಗಾಗಿ ಜಲ ಸಂಪನ್ಮೂಲಗಳ ಸದ್ಬಳಕೆಯಾಗಬೇಕಾದರೆ ರೈತರಿಗೆ ಸೂಕ್ತ ತರಬೇತಿಯ ಅವಶ್ಯಕತೆ ಇದೆ ಎಂದು ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣನವರ್ ಪ್ರತಿಪಾದಿಸಿದರು. ಭಾಲ್ಕಿ ತಾಲ್ಲೂಕಿನ ಕೊಟಗೇರಾದಲ್ಲಿ ನೀರು ಬಳಕೆದಾರರ ಸಹಕಾರ ಸಂಘದಿಂದ ಈಚೆಗೆ ಹಮ್ಮಿಕೊಂಡ  ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಡಾ ಯೋಜನೆಯ ಚಟುವಟಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಲಭ್ಯವಿದ್ದು, ಈ ಭಾಗದ ಚುಳಕಿ, ಕಾರಂಜಾ, ಮಾಂಜ್ರಾ ನದಿಗಳ ಜಲ ಸಂಪನ್ಮೂಲದ ಸದ್ಬಳಕೆಗೆ ಎಂಜಿನಿಯರ್‌ಗಳು ಮತ್ತು ಉನ್ನತ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಶಾಸಕ ಈಶ್ವರ ಖಂಡ್ರೆ ಅವರು ಮಾತನಾಡಿ, ಕೃಷಿ ತಜ್ಞರ ಸಲಹೆಯಂತೆ ರೈತರು ಸೂಕ್ತ ತರಬೇತಿ ಪಡೆದುಕೊಂಡರೆ ಲಾಭದಾಯಕ ಬೆಳೆಗಳನ್ನು ಬೆಳೆಯಬಹುದು ಎಂದರು. ಕಾಡಾ ಅಂತರ್ಗತ ಭಾಲ್ಕಿ ಹಾಗೂ ಜಿಲ್ಲೆಯ ಇತರ ಭಾಗಗಳ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕಾಡಾ ಅಧ್ಯಕ್ಷರು ಮತ್ತು ಎಂಜಿನಿಯರ್ ತಂಡದವರು ಸಹಕರಿಸುವಂತೆ ಕೋರಿದರು.

ಕೃಷಿ ಭೂ ಅಭಿವೃದ್ಧಿ ಅಧಿಕಾರಿ ಎಂ.ಆರ್. ರಂಗನಾಥ, ಕಾರಂಜಾ ಈಈ ಈಶ್ವರ ನಾಯಕ್, ವಿಕಾಸ ಕುಲಕರ್ಣಿ, ಪ್ರಕಾಶ, ತಾಪಂ ಸದಸ್ಯ ಶಿವಕುಮಾರ ಬಾಳೂರ್, ಕಾಂಗ್ರೆಸ್ ಮುಖಂಡ ಕೈಲಾಸನಾಥ ಮಿನಕೆರೆ ಮುಂತಾದವರು ಇದ್ದರು. ಸಹಾಯಕ ಕೃಷಿ ಅಧಿಕಾರಿ ಎನ್.ಎಸ್. ಬಸನಾಳೆ ನಿರ್ವಹಿಸಿದರು. ಸಂಘದ ಅಧ್ಯಕ್ಷ ಹಣಮಂತರಾವ ಬಿರಾದಾರ ಸ್ವಾಗತಿಸಿದರು. ಓಂಕಾರ ಪಾರಶಟ್ಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.