ಹುಮನಾಬಾದ್: ಸ್ವಚ್ಛತೆ ಇದ್ದರೆ ಆಸ್ಪತ್ರೆಗೆ ಬರುವ ವ್ಯಕ್ತಿಗಳ ರೋಗ ನಿಯಂತ್ರಿಸುವ ಶಕ್ತಿ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಹುಮನಾಬಾದ್ ಆಸ್ಪತ್ರೆ ಮಟ್ಟಿಗೆ ಕೊಂಚ ತದ್ವಿರುದ್ಧ. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಸಂಗ್ರಹಗೊಂಡ ಕಸದ ರಾಶಿ ನೋಡಿ ಜನರಿಗೆ ರೋಗ ಹೆಚ್ಚುವ ಭೀತಿ ನಿರ್ಮಾಣವಾಗಿದೆ.
ಹುಮನಾಬಾದ್ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಆಸ್ಪತ್ರೆ ಪ್ರಾಂಗಣ ಸದಾ ಹಂದಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಇನ್ನೂ ಹೊರಗಿನಿಂದ ಆಸ್ಪತ್ರೆಗೆ ಬರಬೇಕಾದರೆ ಮೊದಲಿಗೆ ಕಸದರಾಶಿ ದುರ್ನಾತ ಸವಿದೇ ಬರಬೇಕು. ಅಕ್ಕಪಕ್ಕದ ಸಸ್ಯಹಾರಿ, ಮಾಂಸಹಾರಿ ಮೊದಲಾದ ಹೋಟೆಲ್ಗಳವರು ತಮ್ಮಲ್ಲಿನ ಇಡೀ ಕಸವನ್ನು ಆಸ್ಪತ್ರೆ ಪ್ರವೇಶ ದ್ವಾರದಲ್ಲೇ ಎಸೆಯುವ ಕಾರಣ ಸದಾ ದುರ್ನಾತದಿಂದ ಕೂಡಿರುತ್ತದೆ.
ಕಸವನ್ನು ತೊಟ್ಟಿಗೆ ಚೆಲ್ಲಿದರೆ ಈ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಮೈ ಉಳಿಸಿಕೊಳ್ಳಲು ಆ ಕಸ ತೊಟ್ಟಿ ಪಕ್ಕದಲ್ಲಿ ಎಸೆಯುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿಗಳು ಪ್ರವೇಶ ದ್ವಾರದ ಎದುರು ಸ್ವಚ್ಛತೆ ಕಾಪಾಡುವ ಬಗ್ಗೆ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅರಿವು ಮೂಡಿಸಬೇಕು.
ಜೊತೆಗೆ ಅಕ್ಕಪಕ್ಕದ ಹೊಟೇಲ್ ಕಾರ್ಮಿಕರು ತಾವು ಚೆಲ್ಲುವ ಕಸದಿಂದ ಅನ್ಯರಿಗೆ ಆಗುವ ತೊಂದರೆ ಕುರಿತು ವಿವೇಚಿಸಿದರೆ ಮುಂದೆ ಆಗುವ ಅನಾಹುತ ತಡೆಗಟ್ಟಬಹುದು.
ಸಂಗ್ರಹಗೊಂಡ ಕಸವನ್ನು ಸಂಬಂಧಪಟ್ಟವರು ತಕ್ಷಣ ವಿಲೆವಾರಿ ಮಾಡಿದರೇ ಈ ಸಮಸ್ಯೆ ನಿವಾರಣೆಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಹಾಗೂ ಅಕ್ಕಪಕ್ಕದವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.