ADVERTISEMENT

ರೋಗಮುಕ್ತ ದಾಳಿಂಬೆ ಕೃಷಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 10:45 IST
Last Updated 15 ಜನವರಿ 2012, 10:45 IST

ತೋಟಗಾರಿಕೆ ಬೆಳೆ ನಾಟಿ ಮಾಡಿ ಉತ್ತಮ ಫಸಲು ಪಡೆಯಲು ರೈತರು ಸಾಹಸ ಪಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಸಾಕಷ್ಟು ಲಾಭಾಂಶ ಪಡೆದರು. ನಂತರದ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಬೆಳೆಗೆ ರೋಗಕ್ಕೆ ಈಡಾಗಿ ಕೈ ಸುಟ್ಟುಕೊಂಡ ನೂರಾರು ಉದಾಹರಣೆ ಇವೆ. ಇದಕ್ಕೆ ಪ್ರತಿಯಾಗಿ ಕೆಲವು ರೈತರು ರಾಸಾಯನಿಕರಹಿತ ವಿಧಾನ ಅನುಸರಿಸುತ್ತಿದ್ದಾರೆ. ತಾಲ್ಲೂಕಿನ ಹಿರೆಉಪ್ಪೇರಿ ಗ್ರಾಮದ ದೊಡ್ಡಬಸಪ್ಪ ಅಂಗಡಿ ಇಂಥವರಲ್ಲಿ ಒಬ್ಬರು.

ಸುಭಾಷ ಪಾಳೆಕಾರರ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸುವ ನಿಟ್ಟಿನಲ್ಲಿ ದೊಡ್ಡಬಸಪ್ಪ ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಗೆ ಸಿದ್ಧತೆ ಮಾಡಿಕೊಂಡರು. 5 ಎಕರೆ ಜಮೀನಿನಲ್ಲಿ 1,350 ದಾಳಿಂಬೆ ಸಸಿ ನಾಟಿ ಮಾಡಿದರು. ಕೆಲವೇ ತಿಂಗಳಲ್ಲಿ ಬೆಳೆದು ನಿಂತ ದಾಳಿಂಬೆ ಗಿಡಗಳಿಗೆ ಅಗತ್ಯ ಮಣ್ಣಿನ ಸಾರದ ಕೊರತೆ ನಿಭಾಯಿಸುವ ಉದ್ದೇಶದಿಂದ ಸಾವಯವ ಕೃಷಿ ಅಳವಡಿಸಿದರು.

ಎರಡು ವರ್ಷಗಳ ಹಿಂದೆ ತಾಲ್ಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿಕೊಂಡಿದ್ದ ದಾಳಿಂಬೆ ಬೆಳೆ ಭಾಗಶಃ ದುಂಡಾಣು ರೋಗಕ್ಕೆ ತುತ್ತಾಯಿತು. ಶೇ. 75ಕ್ಕೂ ಹೆಚ್ಚು ರೈತರು ನಷ್ಟಕ್ಕೊಳಗಾಗುವ ಜೊತೆಗೆ ಬೆಳೆಯನ್ನು ತೆಗೆದಿದ್ದಾರೆ. “ಆದರೆ ನನ್ನ ಬೆಳೆಯು ರೋಗನಿರೋಧಕ ಶಕ್ತಿ ಪಡೆದುಕೊಂಡಿದ್ದರಿಂದಲೇ ಕಳೆದ ವರ್ಷ ರೂ. 5 ಲಕ್ಷ ನಿವ್ವಳ ಲಾಭ ಪಡೆದುಕೊಳ್ಳಲು ಸಹಕಾರಿ ಆಗಿದೆ. ಒಂದೆರಡು ಬಾರಿ ಕ್ರಿಮಿನಾಶಕ ಅನಿವಾರ್ಯವಾಗಿ ಬಳಕೆ ಮಾಡಿದ್ದೇವೆ” ಎಂದು ವಿವರಿಸಿದರು.

ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸಿ ತೋಟಗಾರಿಕೆ ಮಾಡಿರುವ ರೈತರ ಬೆಳೆಗಳನ್ನು ಪರಿಶೀಲಿಸಲಾಗಿ ಸಾವಯವ ಕೃಷಿಯನ್ನು ಅವಲಂಬಿಸಿದ ಬಹುತೇಕ ರೈತರು ರೋಗಾಣುಗಳಿಂದ ಭಾಗಶಃ ಮುಕ್ತಿ ಹೊಂದಿರುವುದು ಮೇಲ್ನೊಟಕ್ಕೆ ಕಂಡು ಬರುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ಕೃಷಿ ತಜ್ಞ ಶರಣಪ್ಪ ಉಪ್ಪೇರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ ಅಭಿಮತ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.