ADVERTISEMENT

ಲೋಕಾಯುಕ್ತರ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 11:15 IST
Last Updated 10 ಜುಲೈ 2013, 11:15 IST

ಬೀದರ್: ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್ ಅವರು ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ  ಸ್ವಚ್ಛತೆ ಕಾಪಾಡಲು ಒತ್ತು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

`ಬೆಳಗಿನ ಹೊತ್ತು ಸ್ವಚ್ಛತೆ ಮಾಡಬೇಕು. 10 ಗಂಟೆ ಕಳೆದರೂ ಸ್ವಚ್ಛತೆ ಮಾಡಿಲ್ಲ. ಸಿಬ್ಬಂದಿಯೂ ಬಂದಿಲ್ಲ. ನಿರ್ಲಕ್ಷ್ಯ ಕಾಣುತ್ತಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಉದ್ದೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆ ವಿವಿಧ ವಾರ್ಡ್‌ಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಬೆಳಿಗ್ಗೆ 9.30ಕ್ಕೆ ಆಸ್ಪತ್ರೆಗೆ ಆಗಮಿಸಿದ ಅವರು, ಶಸ್ತ್ರಚಿಕಿತ್ಸಾ ವಿಭಾಗ, ಗರ್ಭಿಣಿಯರ ಆರೈಕೆ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳಿಂದ ಚಿಕಿತ್ಸೆ ಮತ್ತು ಸೇವೆ ಕುರಿತು ಮಾಹಿತಿ ಪಡೆದರು. ಬಳಿಕ ಹಾಜರಾತಿ ದಾಖಲೆ ಪರಿಶೀಲಿಸಿದರು.

ಆ ನಂತರ ಅಡುಗೆ ಕೋಣೆಯತ್ತ ತೆರಳಿದ್ದು, ಅಲ್ಲಿ ಅಡುಗೆ ಬಳಸುತ್ತಿರುವ ಪರಿಕರಗಳ ಬಗೆಗೆ ಮಾಹಿತಿ ಪಡೆದರು. ಆ ಸಂದರ್ಭದಲ್ಲಿ ಸ್ಟೋರ್ ರೂಂಗೆ ಬೀಗ ಹಾಕಲಾಗಿತ್ತು. ಸಿಬ್ಬಂದಿ ಕರೆಸುವಂತೆ ಸೂಚಿಸಿ ಅಲ್ಲಿಯೇ ನಿಂತರು. ಇತ್ತ, ಸಿಬ್ಬಂದಿ ಬರುವುದು ಅದಕ್ಕಾಗಿ ಸುಮಾರು 20 ನಿಮಿಷ ಕಾಯಬೇಕಾಯಿತು. ಅಕ್ಕಿ, ಬೇಳೆಯನ್ನು ಹಿಡಿದು ಗುಣಮಟ್ಟ ಪರಿಶೀಲಿಸಿದ ಅವರು, ರೋಗಿಗಳಿಗೆ ಕೊಡುವ ಆಹಾರದ ವಿವರ ಪಡೆದರು.

ಅನೈರ್ಮಲ್ಯ ಕುರಿತು ಆಕ್ಷೇಪ ಕೇಳಿಬಂದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ಕಾಶೀನಾಥ ಕಾಂಬ್ಳೆ, ವೈದ್ಯರು, ಶುಶ್ರೂಷಕರೂ ಸೇರಿದಂತೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಪರಿಪೂರ್ಣ ನಿರ್ವಹಣೆ ಸಾಧ್ಯ ಆಗುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.