ADVERTISEMENT

ವಕೀಲನ ಸಾವು, ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 10:35 IST
Last Updated 1 ಜುಲೈ 2012, 10:35 IST

ಬೀದರ್: ವಕೀಲರೊಬ್ಬರನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎನ್ನಲಾಗಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ನಗರದ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಾಲಿಂಗ ಕಾಲೋನಿಯ ಸಂಗಮೇಶ್ವರ ಮಸ್ಕಲೆ (32) ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟವರು.

`ಮದುವೆ ನಿಮಿತ್ತ ಸಂಗಮೇಶ್ವರ ಸ್ನೇಹಿತರೊಂದಿಗೆ ಶುಕ್ರವಾರ ತಾಲ್ಲೂಕಿನ ದದ್ದಾಪುರ ಗ್ರಾಮಕ್ಕೆ ತೆರಳಿದ್ದರು. ರಾತ್ರಿ ಏಕಾಏಕಿ ಅವರ ಜೊತೆಗಿದ್ದ ಸ್ನೇಹಿತರು ಕರೆ ಮಾಡಿ ಸಂಗಮೇಶ್ವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಪ್ರಯಾವಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು~ ಎಂದು ಮೃತರ ಸಹೋದರ ವಿಜಯಕುಮಾರ ಮಸ್ಕಲೆ ದೂರಿನಲ್ಲಿ ವಿವರಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶನಿವಾರ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಮೃತರ ಸಂಬಂಧಿಕರ ಅಕ್ರಂದನ ಕರುಳು ಹಿಚುಕುವಂತಿತ್ತು. ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ ಬಿ.ಎಂ., ನ್ಯೂಟೌನ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕಪಿಲ್‌ದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.