ADVERTISEMENT

ವಾಟರ್ ಟ್ಯಾಂಕ್ ಸುತ್ತ ದುರ್ನಾತ

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:10 IST
Last Updated 5 ಮೇ 2012, 5:10 IST
ವಾಟರ್ ಟ್ಯಾಂಕ್ ಸುತ್ತ ದುರ್ನಾತ
ವಾಟರ್ ಟ್ಯಾಂಕ್ ಸುತ್ತ ದುರ್ನಾತ   

ಹುಮನಾಬಾದ್: ಪಟ್ಟಣದ ಜನತೆಗೆ ಕಾರಂಜಾ ಜಲಾಶಯದಿಂದ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಇಲ್ಲಿನ ಪುರಸಭೆ ವಾಣಿಜ್ಯ ಸಂಕೀರ್ಣ ಪ್ರದೇಶದಲ್ಲಿನ ವಾಟರ್ ಟ್ಯಾಂಕ್ ಸುತ್ತಲಿನ ಪ್ರದೇಶ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟು ದುರ್ನಾತ ಹರಡುತ್ತಿರುವ ಕಾರಣ ಸಾರ್ವಜನಿಕರು   ಮೂಗು ಮೂಚ್ಚಿಕೊಂಡೇ ಅಡ್ಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಪುರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಬಿಡಿ ಭಾಗದಲ್ಲಿ ನಿರ್ಮಿಸಲಾದ ವಾಟರ್ ಟ್ಯಾಂಕ್ ಸುತ್ತಲು ವ್ಯಾಪಾರಸ್ಥರು ಮೂತ್ರವಿಸರ್ಜನೆ ಮಾಡುತ್ತಿರುವ ಏಕೈಕ ಕಾರಣ ದುರ್ನಾತ ಹರಡಿ, ಸಾರ್ವಜನಿಕರಿಗೆ, ವಿಶೇಷವಾಗಿ ಚಿಣ್ಣರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
 
ತೊಂದರೆ ಆಗುತ್ತಿರುವ ಕುರಿತು ಆ ಭಾಗದ ನಿವಾಸಿಗಳು ಅನೇಕ ಬಾರಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ವಾರ್ಡ್‌ನ ಸದಸ್ಯರ ಗಮನಕ್ಕೆ ತಂದರೂ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ನಿವಾಸಿಗಳ ಆರೋಪ. ಈ ಮಧ್ಯೆ ನೀರು ಸರಬರಾಜು ವಿಭಾಗದ ಮುಖ್ಯಸ್ಥ ಈಶ್ವರ ತೆಲಂಗ್, ನೀರು ಪೂರೈಕೆ ಮಾಡುವ ವಿಶ್ವನಾಥ, ಮಾರುತಿ ಮತ್ತು ಬಸವರಾಜ ಅವರು ಟ್ಯಾಂಕ್ ಸುತ್ತ ಮೂತ್ರವಿಸರ್ಜನೆ ಮಾಡದಿರುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. 

ದುರ್ನಾತದ ಜೊತೆಗೆ ಕಳೆದ 25ವರ್ಷ ಹಿಂದೆ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದಲ್ಲಿ ಬಹುತೇಕ ಮಳಿಗೆಗಳು ನಿರ್ವಹಣೆ ಕೊರತೆ ಕಾರಣ ಶಿಥಲಾವಸ್ಥೆಗೆ ತಲುಪಿದ್ದು, ಅವುಗಳ ಷಟರ್ ಮತ್ತು ಕಿತ್ತುಹೋಗಿರುವ ಪ್ಲಾಸ್ಟರ್ ಮಾಡಿಸಿದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನೂಕೂಲ ಆಗುತ್ತದೆ ಆದ್ದರಿಂದ ಈ ಕಾರ್ಯವನ್ನು ಸಾಧ್ಯವಾದಷ್ಟು ಶೀಘ್ರ ಕೈಗೆತ್ತಿಕೊಳ್ಳಬೇಕು ಎನ್ನುವುದು ವ್ಯಾಪಾರಿಗಳಾದ ಅನಿಲ ದೇವತರಾಜ, ಸಂತೋಷ ಡೊಂಗರಗಾಂವ, ನಾರಾಯಣ ಪರೀಟ್, ಷರೀಫ್‌ಖಾನ್, ಸಂತೋಷ ಹೀರಾಪೂರ, ಹೋಟೆಲ್ ನಯೂಮ್, ಹೊಟೇಲ್ ಮೆಹೆಬೂಬ್, ಸೈಕಿಲ್ ದುರಸ್ತಿ ಅಂಗಡಿಯ ತಿಪ್ಪಣ್ಣ ಶಬ್ಬೀರ್ ಮೊದಲಾದವರು ~ಪ್ರಜಾವಾಣಿ~ ಎದುರು ತಮ್ಮ ನೋವು ತೋಡಿಕೊಂಡಿದ್ದಾರೆ.

ಡಿ.ಸಿ ಗಮನಕ್ಕೆ: ನಗರದಲ್ಲಿ ಕೈಗೊಳ್ಳುತ್ತಿರುವ ರಸ್ತೆ, ಚರಂಡಿ ಮೊದಲಾದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಂಬಂಧ ನಗರ ಸಂಚಾರ ನಡೆಸುತ್ತ್ದ್ದಿದ ವೇಳೆ ಶಿಥಿಲಾವಸ್ಥೆಗೆ ತಲುಪಿದ ವಾಣಿಜ್ಯ ಸಂಕೀರ್ಣ, ದುರ್ನಾತ ಹರಡುತ್ತಿರುವ ವಾಟರ್ ಟ್ಯಾಂಕ್ ಪ್ರದೇಶ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರ ಗಮನಕ್ಕೂ ತಂದಾಗ ಪರಿಶೀಲಿಸಿ, ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಸುದ್ದಿಗಾರರಿಗೆ ಭರವಸೆ ನೀಡಿದ್ದರು. ಭೇಟಿ ನೀಡಿ 2ತಿಂಗಳು ಗತಿಸಿದರೂ ಯಾವುದೇ ಸುಧಾರಣೆ ಕಂಡಿಲ್ಲ. ಆದ್ದರಿಂದ ದಕ್ಷ ಆಡಳಿತಕ್ಕೆ ಹೆಸರಾದ ಜಿಲ್ಲಾಧಿಕಾರಿ ಶುಕ್ಲಾ ಅವರು ಸಂಬಂಧಪಟ್ಟ ಸಿಬ್ಬಂದಿಗೆ ಸುಧಾರಣೆ ಕೈಗೊಳ್ಳಲು ಸೂಚಿಸಬೇಕು ಎನ್ನುವುದು ನಿವಾಸಿಗಳ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.