
ವಾಡಿ: ಪುರಸಭೆ ವತಿಯಿಂದ ಹಮ್ಮಿಕೊಂಡ ಸಮಗ್ರ ನೀರು ಸರಬರಾಜು ಯೋಜನೆಯಡಿ ಸುಮಾರು ₨12ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಜಲ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲು ಫೆ.28ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ ಎಂದು ಅಧ್ಯಕ್ಷೆ ಹಸೀನಬೇಗಂ ಖುರೇಷಿ ತಿಳಿಸಿದರು.
ಎಸ್ಎಫ್ಪಿ ಯೋಜನೆಯಡಿ ಸುಮಾರು ₨ 5ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ₨12ಲಕ್ಷದಲ್ಲಿ 7, 11 ನೇ ವಾರ್ಡ್ನಲ್ಲಿ ಮಹಿಳಾ ಸಮುದಾಯ ಶೌಚಾಲಯ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂದು ಬುಧವಾರ ಪುರ-ಸಭೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5,7,10,19,ವಾರ್ಡ್ನಲ್ಲಿ ಸುಮಾರು ₨69ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿಮೆಂಟ್ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಗೂದ್ದಲಿ ಪೂಜೆ ಮತ್ತು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₨ 3ಲಕ್ಷ ಸಹಾಯಧನ ಮತ್ತು ₨ 6ಲಕ್ಷ ಆರೋಗ್ಯ ಪರಿಹಾರಧನ ಹಾಗೂ ಪುರಸಭೆ 23ಪೌರ ಕಾರ್ಮಿಕರರಿಗೆ ₨7ಲಕ್ಷದ ಅನಿಲ ಸಿಲಿಂಡರ್ ಉಚಿತವಾಗಿ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ರಮೇಶ ಪಟ್ಟೆದಾರ್ ಸಮಾರಂಭದ ವಿವರ ನೀಡಿದರು.
ಸ್ವಯಂ ಉದ್ಯೋಗ ಮಾಡುತ್ತಿರುವ ಯುವಕರಿಗೆ ₨ 23ಲಕ್ಷ ಸಹಾಯಧನ ಹಾಗೂ ಅಂಗವಿಕಲರಿಗೆ ಮೂರು ಸೈಕಲ್ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು. ಫೆ.28ರ ಸಮಾರಂಭಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವ ಖಮರುಲ್ ಇಸ್ಲಾಂ ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.