ADVERTISEMENT

ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:40 IST
Last Updated 16 ಅಕ್ಟೋಬರ್ 2012, 5:40 IST

ಔರಾದ್: ಇಲ್ಲಿಯ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಕಾಲೇಜು ವಸತಿ ನಿಲಯದಲ್ಲಿ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳು ಭರ್ತಿಯಾಗಿ ಊಟ ಮತ್ತಿತರೆ ಸೌಲಭ್ಯಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ.

ಶಾಸಕರು ಮತ್ತು ಸಂಸದರ ಶಿಫಾರಸಿನನ್ವಯ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. `ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ~ ಎಂದು ವಸತಿ ನಿಲಯದ ಕೆಲ ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.

`ಸಮಯಕ್ಕೆ ಸರಿಯಾಗಿ ಊಟ ಮತ್ತು ಉಪಹಾರ ಬಡಿಸುವುದಿಲ್ಲ. ವಾಸ್ತವ್ಯಕ್ಕೆ ಕೊಠಡಿ ಕೊರತೆಯಿಂದ ಒಂದೊಂದರಲ್ಲಿ 5-10 ವಿದ್ಯಾರ್ಥಿಗಳು ಇರಬೇಕಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಊಟದ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯದ ಕೊರತೆ ನಡುವೆ ನಾವು ಇಲ್ಲಿ ಅಧ್ಯಯನ ಮಾಡಬೇಕಾಗಿದೆ~ ಎಂದು ದೂರಿದ್ದಾರೆ.
ವಸತಿ ನಿಲಯಕ್ಕೆ ಮುಖ್ಯ ದ್ವಾರ ಇಲ್ಲದೆ ರಾತ್ರಿ ಜಾನುವಾರು ಮತ್ತು ನಾಯಿಗಳ ಕಾಟ ಜಾಸ್ತಿಯಾಗಿದೆ.

ವಿದ್ಯುತ್ ಕೈಕೊಟ್ಟರೆ ಕತ್ತಲೆಯಲ್ಲಿ ಕಾಲ ಕಳೆಯಬೇಕು. ಸಮಸ್ಯೆ ಹೇಳಿಕೊಳ್ಳಲು ವಸತಿ ನಿಲಯದಲ್ಲಿ ಮೇಲ್ವಿಚಾರಕರು ಇರುವುದಿಲ್ಲ. ಆಗಾಗ ಬಂದು ಅಡುಗೆ ಮಾಡಲು ಆಹಾರಧಾನ್ಯ ಕೊಟ್ಟು ಹೋಗುತ್ತಾರೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿತರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದೇ ಇಲಾಖೆ ಬೀದರ್‌ನಲ್ಲಿರುವ ವಸತಿನಿಲಯಗಳಲ್ಲಿರುವ ಸೌಲಭ್ಯಗಳನ್ನು ನಮಗೇಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ವಾರದೊಳಗೆ ಅಗತ್ಯ ಸೌಲಭ್ಯ ಕಲ್ಪಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಇಲ್ಲಿನ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.