ADVERTISEMENT

ಶರಣರ ಸ್ಮರಣೋತ್ಸವಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 9:20 IST
Last Updated 5 ಮಾರ್ಚ್ 2011, 9:20 IST
ಶರಣರ ಸ್ಮರಣೋತ್ಸವಕ್ಕೆ ಸಜ್ಜು
ಶರಣರ ಸ್ಮರಣೋತ್ಸವಕ್ಕೆ ಸಜ್ಜು   

ಬಸವಕಲ್ಯಾಣ: ಸಾಮಾಜಿಕ ನ್ಯಾಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶರಣ ಹರಳಯ್ಯ ಮತ್ತು ಮಧುವಯ್ಯನವರ ಸ್ಮರಣೋತ್ಸವಕ್ಕಾಗಿ ಇಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಎಲ್ಲೆಡೆ ಹಬ್ಬದ ವಾತಾವರಣ ಕಾಣುತ್ತಿದೆ.

ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಘಟಕದಿಂದ ಈ ಅಭೂತಪೂರ್ವ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಾಗಿ ಇಲ್ಲಿನ ರಥ ಮೈದಾನದಲ್ಲಿ ಬೃಹತ್ ಮಂಟಪ, ಆಕರ್ಷಕ ವೇದಿಕೆ ನಿರ್ಮಾಣಗೊಂಡಿದೆ. ಮುಖ್ಯರಸ್ತೆಯಲ್ಲಿ ಸ್ವಾಗತ ಕಮಾನು, ಕಟೌಟ್‌ಗಳನ್ನು ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅಲ್ಲಮಪ್ರಭು ಮಠದ ಹತ್ತಿರ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.

ಬಸವಣ್ಣನವರ ನೇತೃತ್ವದಲ್ಲಿ 12 ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ನಡೆದು, ಸಮಾಜದಲ್ಲಿ ಸಂಘರ್ಷ ನಡೆಯುತ್ತದೆ. ಬಿಜ್ಜಳ ರಾಜನು ಸಮಗಾರ ಕಾಯಕದ ಹರಳಯ್ಯ ಮತ್ತು ಬ್ರಾಹ್ಮಣನಾದ ಮಧುವಯ್ಯನಿಗೆ ಆನೆ ಕಾಲಿಗೆ ಕಟ್ಟಿ ಎಳೆಯುವ ‘ಎಳೆಹೂಟೆ’ ಶಿಕ್ಷೆ ಕೊಡುತ್ತಾನೆ. ಕೆಲವರ ಹತ್ಯೆ ನಡೆಯುತ್ತದೆ. ಅಂದು ಹುತಾತ್ಮರಾದ ಆ ಶರಣರ ನೆನಪಿಗಾಗಿ ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದೆ. ಮಾನವೀಯ ಸಂಬಂಧ ಬಲಪಡಿಸಲು ಇದರಿಂದ ಪ್ರೇರಣೆ ಸಿಗಲಿ. ಶರಣತತ್ವ ಎಲ್ಲೆಡೆ ಪ್ರಸಾರವಾಗಲಿ ಎಂಬ ಸದುದ್ದೇಶದಿಂದ ಇದನ್ನು ಆಯೋಜಿಸಲಾಗಿದೆ.

ಶನಿವಾರ ಬೆಳಿಗ್ಗೆ ಭವ್ಯ ಮೆರವಣಿಗೆ ನಡೆಯುತ್ತದೆ. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಶತಾಯುಷಿಗಳಾದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ‘ಮಹಾಮಹಿಮ’ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗುತ್ತದೆ. ನಾಡಿನ ಪ್ರಮುಖ ಮಠಾಧೀಶರು, ಕೇಂದ್ರ ಮತ್ತು ರಾಜ್ಯ ಸಚಿವರು, ವಿವಿಧೆಡೆಯ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.  ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.