ಬಸವಕಲ್ಯಾಣ: ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಟ್ಟಿದ್ದರಿಂದ ಕಳೆದ 6 ವಿಧಾನಸಭಾ ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಸ್ಥಳಿಯರಿಗೆ ಅವಕಾಶ ಕೊಡಬೇಕು ಎಂದು ಭಾನುವಾರ ಇಲ್ಲಿಗೆ ಆಗಮಿಸಿದ್ದ ಪಕ್ಷದ ವೀಕ್ಷಕ ಪ್ರಕಾಶ ರಾಠೋಡ ಅವರಿಗೆ ಕೆಲವರು ಜಂಟಿಯಾಗಿ ಮನವಿ ಪತ್ರ ಕೊಟ್ಟಿದ್ದಾರೆ.
ಆದ್ದರಿಂದ ಪಕ್ಷದ ಕಾರ್ಯಕರ್ತರು 30 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದಾರೆ. ಸಮರ್ಥ ನೇತೃತ್ವ ಇಲ್ಲದ್ದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಈ ಸಲ ಅಂಥ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿನಂತಿಸಲಾಗಿದೆ.
ಈ ಕ್ಷೇತ್ರದಿಂದ ಸ್ಪರ್ಧಿಸಬಯಸಿರುವ 12 ಜನ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಹಿರಿಯ ಮುಖಂಡ ಅಂಗದರಾವ ಜಗತಾಪ, ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಪ್ರಮುಖರಾದ ಶಿವರಾಜ ನರಶೆಟ್ಟಿ, ವಿಕ್ರಮ ಪಾಟೀಲ, ವಸಂತರಾವ ನಾಗದೆ, ಸುಧಾಕರ ಗುರ್ಜರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಜಗನ್ನಾಥ ತಾಂಬೋಳೆ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ದತ್ತಾತ್ರಿ ಪರಶುರಾಮ, ಕೆಪಿಸಿಸಿ ಮಾಜಿ ಸದಸ್ಯ ಡಾ.ಅಜಯ ಜಾಧವ, ದತ್ತು ಧುಳೆ ಪಾಟೀಲ, ಸೈಯದ್ ಯಶ್ರಬ್ ಅಲಿ, ಸಂಜಯಸಿಂಗ ಹಜಾರಿ ಇವರಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಲಾಗಿದೆ.
ಒಂದುವೇಳೆ ಇವರಲ್ಲಿ ಯಾರಿಗಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ ಎಂದು ಹೇಳಲಾಗಿದೆ. ಮನವಿ ಪತ್ರದಲ್ಲಿ ಈ ಎಲ್ಲರೂ ಸಹಿ ಹಾಕಿದ್ದಾರೆ.
ವೀಕ್ಷಕ ಎಸ್.ಎ.ಜಿದ್ದಿ, ಜಿಲ್ಲಾ ಉಸ್ತುವಾರಿಗಳಾದ ಅನ್ವರ ಮುಧೋಳ, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಕಾಸಿಂ ಬೇಗ್, ಚಂದ್ರಕಾಂತ ಮೇತ್ರೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.