ADVERTISEMENT

ಹಿಪ್ಪಳಗಾಂವ್‌ಗೆ 3 ಶಿಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 6:15 IST
Last Updated 13 ಜುಲೈ 2012, 6:15 IST

ಔರಾದ್: ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮದ ಕನ್ನಡ ಮಾಧ್ಯಮ ಶಾಲೆಗೆ ಹೊಸದಾಗಿ ಮೂವರು ಶಿಕ್ಷಕರು ಸೇವೆಗೆ ಸೇರಿಕೊಂಡಿದ್ದಾರೆ.

ಈ ಶಾಲೆಯಲ್ಲಿ 140 ಮಕ್ಕಳಿಗೆ ಇಬ್ಬರೇ ಶಿಕ್ಷಕರು ಎಂಬ ಶೀರ್ಷಿಕೆಯಡಿ ಈಚೆಗೆ `ಪ್ರಜಾವಾಣಿ~ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರಸ್ವಾಮಿ ಬುಧವಾರ ಸ್ವತಃ ಶಾಲೆಗೆ ಹೋಗಿ ಇಬ್ಬರು ಶಿಕ್ಷಕರನ್ನು ನಿಯೋಜನೆ ಮೇಲೆ ಸೇವೆಗೆ ಸೇರಿಸಿ ಬಂದಿದ್ದಾರೆ. ಹೆಡಗಾಪುರ ಶಾಲೆ ಶಿಕ್ಷಕ ಮಲ್ಲಯ್ಯಸ್ವಾಮಿ, ಸೋಮಲನಾಯಕ ತಾಂಡಾ ಶಾಲೆ ಶಿಕ್ಷಕಿ ಗೀತಾ ಈಗ ಹಿಪ್ಪಳಗಾಂವ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಸಿಯಾಗಿ ಕೆಲಸ ಮಾಡುತ್ತಿದ್ದ ರಾಜಪ್ಪ ಎಂಬ ಶಿಕ್ಷಕ ಕೌನ್ಸ್‌ಲಿಂಗ್‌ನಲ್ಲಿ ಹಿಪ್ಪಳಗಾಂವ್ ಶಾಲೆ ಆಯ್ಕೆ ಮಾಡಿಕೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಅವರು ಸೇವೆಗೆ ಸೇರಿಕೊಂಡ ನಂತರ ಸದ್ಯಕ್ಕೆ ಇಲ್ಲಿ ಶಿಕ್ಷಕರ ಸಮಸ್ಯೆ ಪರಿಹಾರವಾಗಿದೆ ಎಂದಿದ್ದಾರೆ.

ತಾಲ್ಲೂಕಿನ 132 ಪ್ರಾಥಮಿಕ ಮತ್ತು 34 ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಬಿಆರ್‌ಜಿಎಫ್ ಯೋಜನೆಯಡಿ ಈ ಖಾಲಿ ಶಿಕ್ಷಕರ ಹುದ್ದೆ ತುಂಬಲು ಜಿಲ್ಲಾ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಲಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ತಿಂಗಳಿನಿಂದ ಯಾವ ಶಾಲೆಯಲ್ಲಿ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮಸ್ಥರ ಸಂತಸ: ಪತ್ರಿಕೆ ವರದಿಗೆ ಸ್ಪಂದಿಸಿ ತಕ್ಷಣ ಇಬ್ಬರು ಶಿಕ್ಷಕರನ್ನು ನಿಯೋಜನೆ ಮೇಲೆ  ಕಳುಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೆಲಸಕ್ಕೆ ಹಿಪ್ಪಳಗಾಂವ್ ಗ್ರಾಮದ ಸಮಾಜ ಕಾರ್ಯಕರ್ತ ಶಶಿಕಾಂತ ಪಾಂಚಾಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.