ADVERTISEMENT

‘ಜಾನಪದ ಸಂಸ್ಕೃತಿ ತಾಯಿಬೇರು’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 4:29 IST
Last Updated 14 ಡಿಸೆಂಬರ್ 2013, 4:29 IST

ಕಮಲನಗರ: ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ಕಲೆ, ಸಂಸ್ಕೃತಿಯನ್ನು ಉಳಿಸುವಲ್ಲಿ  ಹಿಂದೆ ಬಿದ್ದಿದ್ದೇವೆ. ಜಾನಪದ ಸಂಸ್ಕೃತಿಯ ತಾಯಿಬೇರು ಎಂಬುದನ್ನು  ಮರೆಯಬಾರದು ಎಂದು ಪ್ರೊ.ಹಾವಗಿರಾವ್‌ ವಟಗೆ ಹೇಳಿದರು.

ಸಮೀಪದ ಮುಧೋಳ್‌ (ಬಿ) ಗ್ರಾಮದ ಬಸವ ಮಂಟಪದಲ್ಲಿ ಈಚೆಗೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸ್ಥಳೀಯ ಯೋಜನೆಯಡಿ ಆಯೋಜಿ­ಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶೀಯತೆ, ಸಂಸ್ಕೃತಿಯನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ­ಯಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ ಎಂದರು.

ಬಸವರಾಜ ಖೇಳಗೆ ಮಾತನಾಡಿ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನಿಸುವ ಅಗತ್ಯವಿದೆ. ಜಾನಪದ ಕಲಾವಿದರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮಾಸಾಶನಗಳ ಸದುಪ­ಯೋಗವನ್ನು ಸ್ಥಳೀಯ ಕಲಾವಿದರು ಪಡೆಯಲು ಪ್ರಯತ್ನಿಸಬೇಕು ಎಂದರು.

ಮುಖಂಡ ಅಮೃತರಾವ್‌ ವಟಗೆ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಿ ತೊಗರೆ, ವಿಮಲಾಬಾಯಿ ಡಬ್ಬೆ ಮತ್ತು ಗಂಗಮ್ಮ ಮುರಾಳೆ ಸೋಬಾನ ಹಾಡುಗಳನ್ನು ಹಾಡಿದರು. ನ್ಯಾಯವಾದಿ ಪುರುಷೋತ್ತಮ ದೇಸಾಯಿ, ಗಣಪತಿರಾವ್‌ ಮುಕ್ತೇದಾರ್‌ ಹಾಗೂ ಬಸಯ್ಯ ಸ್ವಾಮಿ ಭಕ್ತಿ ಗೀತೆ, ಜಾನಪದ ಗೀತೆಗಳನ್ನು ಹಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಧನರಾಜ ಗುಡ್ಡಾ, ಬಾಬುರಾವ್‌ ಹಲಬರ್ಗೆ, ಧೂಳಪ್ಪ ನಂದನವರೆ, ವಿಜಯಕುಮಾರ ಮಠಪತಿ, ಬಾಬುರಾವ್‌ ಗುಡ್ಡಾ, ರಾಜಕುಮಾರ ಕುಂಬಾರ್‌ ಇದ್ದರು. ಶಿವಕುಮಾರ ಕುಂಬಾರ್‌ ಸ್ವಾಗತಿಸಿದರು. ಬಾಲಾಜಿ ಹಲಬರ್ಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.