ADVERTISEMENT

‘ಸಾಹಿತ್ಯದಿಂದ ಮೂಢನಂಬಿಕೆ ನಾಶ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 6:11 IST
Last Updated 4 ಜನವರಿ 2014, 6:11 IST

ಚಿಟಗುಪ್ಪಾ: ಕನ್ನಡ ಭಾಷೆಗೆ ಭವ್ಯ ಪರಂಪರೆ ಹೊಂದಿದ್ದು, ಪ್ರತಿ ಕನ್ನಡಿಗನೂ ಪುರಾತನ ಇತಿಹಾಸದ ವಾರಸುದಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ನಡೆದ 17 ನೇ ವಲಯ ಮಟ್ಟದ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಸಂತರ, ಶರಣರ ಸಾಹಿತ್ಯಗಳು ವಿಶ್ವಕ್ಕೆ ದಾರಿ ದೀಪ­ವಾಗಿವೆ. ಇಂದಿನ ಆಧುನಿಕ ಯುಗದಲ್ಲಿ ಮಹಾತ್ಮರ ಸಾಹಿತ್ಯ ಪ್ರಸ್ತುತ. ಚಿಕ್ಕ ವಿಷಯಗಳಿಗಾಗಿ ಸಮಾಜದಲ್ಲಿ ಇಂದು ತಮ್ಮ ತನದ ಅಸ್ತಿತ್ವ ಕಳೆದು­ಕೊಳ್ಳುತ್ತಿರುವುದು ವಿಷಾದನೀಯ  ಎಂದರು.

ಕುವೆಂಪು ಅವರ ಕವಿ ವಾಣಿಯಂತೆ ವಿಶ್ವ ಮಾನವನಾಗಲು ಪ್ರಯತ್ನಿಸಬೇಕು. ಎಲ್ಲರಿಗೂ ಸಮಾನವಾದ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಸಾಹಿತ್ಯದಿಂದ ಮೂಢನಂಬಿಕೆ ನಾಶವಾಗುತ್ತದೆ. ಆತ್ಮಸಾಕ್ಷಾತ್ಕಾರದ ಅರಿವು ಮೂಡಿಸುತ್ತದೆ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ರಾಜಶೇಖರ್ ಕೋರವಾರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸರ್ಕಾರ ಹೆಚ್ಚು ಕನ್ನಡ ಪರ ಚಟುವಟಿಕೆಗಳು ನಡೆಸಬೇಕು ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಜಯಮ್ಮ ನೇಲಗಿ, ಮುಖ್ಯಾಧಿಕಾರಿ ಮಹ್ಮದ್ ಯೂಸೂಫ್ ಹುಸೇನ್, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಮಾತನಾಡಿದರು.

ಶಿಕ್ಷಕ ಶಿವಲಿಂಗ ಹೆಡೆ ಉಪನ್ಯಾಸ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಕೆ ಗಾದಗೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟರೆಡ್ಡಿ ಕೋಪಗೀರ, ಜಗನ್ನಾಥ. ಕೆ ಹಲಮಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಿ. ಚಂದ್ರಶೇಖರ್, ಬಿ.ಎಸ್. ಕುಚಬಾಳ್, ಸಂಜೀವಕುಮಾರ ಅತಿವಾಳ, ಪ್ರಾಚಾರ್ಯ ಮಲ್ಲಿಕಾರ್ಜುನ, ಡಾ. ಅನಿಲಕುಮಾರ, ವಿಜಯಕುಮಾರ ಚಿಟಗುಪ್ಪಾಕರ ಇದ್ದರು.

ಪ್ರಾಚಾರ್ಯ ಕಮಲಾಬಾಯಿ ಮೈನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅನಿಲಕುಮಾರ ಸಿಂಧೆ ನಿರೂಪಿಸಿದರು. ಮಹಾರುದ್ರಪ್ಪ ಆಣದೂರ ಸ್ವಾಗತಿಸಿದರು. ಸವಿತಾ ಮುತ್ತಲಗೇರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.