ಬಸವಕಲ್ಯಾಣ: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ನೇತೃತ್ವದಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ತಾಲ್ಲೂಕಿನಲ್ಲಿ ಪ್ರತಿದಿನ 10 ಸಾವಿರ ಜನರಿಗೆ ಊಟ ಪೂರೈಕೆ ಆಗುತ್ತಿದೆ.
ಲಾಕ್ಡೌನ್ ಕಾರಣ ಸಂಕಟದಲ್ಲಿ ರುವ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ಅವರಿದ್ದ ಸ್ಥಳಕ್ಕೆ ಊಟದ ಪೊಟ್ಟಣಗಳನ್ನು ಕೊಡಲಾಗುತ್ತಿದೆ. ನೂರಾರು ಕಾರ್ಯಕರ್ತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
‘ಊಟ ಸಿದ್ಧಪಡಿಸುವಲ್ಲಿ ಹಾಗೂ ಪೊಟ್ಟಣ ತಯಾರಿಕೆಯಲ್ಲಿ ಪ್ರತಿದಿನ ಅನೇಕ ಯುವಕರು, ಮಹಿಳೆಯರು ಸಹಕರಿಸುತ್ತಿದ್ದಾರೆ. ನಗರದಲ್ಲಿನ ಪ್ರತಿ ಓಣಿಗಳಿಗೆ ಮತ್ತು ಹಳ್ಳಿಗಳಿಗೂ ಪೊಟ್ಟಣಗಳನ್ನು ತೆಗೆದುಕೊಂಡು ಹೋಗಿ ಹಂಚಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ಸೋಂಕಿತರಿಗೆ, ಇತರೆ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಒಂದು ಸಲಕ್ಕೆ 1,200 ಪಾಕೆಟ್ ಊಟ ನೀಡುತ್ತಿದ್ದೇವೆ’ ಎಂದು ನಗರಸಭೆ ಸದಸ್ಯ ರವೀಂದ್ರ ಬೋರೋಳೆ ತಿಳಿಸಿದರು.
‘ಪ್ರತಿದಿನ 10 ಕ್ವಿಂಟಲ್ ಅಕ್ಕಿ ಬೇಕಾಗುತ್ತಿದೆ. ಅನ್ನ, ಚಪಾತಿ, ಸಾಂಬಾರು, ವಿವಿಧ ರೀತಿಯ ತರಕಾರಿಗಳ ಪಲ್ಯ, ಮೊಸರು, ಮಜ್ಜಿಗೆ ಒಳಗೊಂಡ ಆಹಾರ ಪೂರೈಸ ಲಾಗುತ್ತಿದೆ. 10 ದೊಡ್ಡ ಪಾತ್ರೆಗಳಲ್ಲಿ ಊಟ ಸಿದ್ಧಪಡಿಸಿ ಪೊಟ್ಟಣ ಗಳಲ್ಲಿ ತುಂಬಿ ವಿತರಿಸಲಾಗುತ್ತಿದೆ’ ಎಂದು ಮುಖಂಡರಾದ ಶರಣು ಆಲಗೂಡ, ರಾಮ ಜಾಧವ ಮಾಹಿತಿ ನೀಡಿದರು.
‘ಕೊರೊನಾ ಸೋಂಕಿತರಿಗೆ ಹಾಗೂ ಮೃತರ ಸಾಗಣೆಗೆ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿಗಾಗಿ 2 ಆಂಬುಲೆನ್ಸ್ಗಳ ಸೇವೆ ಆರಂಭಿಸಲಾಗಿದೆ’ ಎಂದು ಸಂತೋಷ ಗುತ್ತೇದಾರ್ ತಿಳಿಸಿದರು.
ಊಟ ವಿತರಣಾ ಕಾರ್ಯದಲ್ಲಿ ಸೋನುಸಿಂಗ್ ಹಜಾರಿ, ಜೈದೀಪ್ ತೆಲಂಗ್, ಯೋಗೇಶ ಗುತ್ತೇದಾರ್, ದಿನೇಶ ರಾಠೋಡ, ಜಗನ್ನಾಥ ತಾಂಬೋಳೆ, ದತ್ತು ಪದ್ಮೆ, ಸೈಯದ್ ಇಫ್ತೆಕಾರ್, ಆಸೀಫ್ ಮಂಠಾಳ, ಕೃಷ್ಣಾ ತೊಗಲೂರ ಮೊದಲಾದವರು ತೊಡಗಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.