ಬಸವಕಲ್ಯಾಣ: ‘ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ಇಲ್ಲಿನ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆಯ ಆವರಣದಲ್ಲಿ ಅಕ್ಟೋಬರ್ 30 ಹಾಗೂ 31ರಂದು 19ನೇ ಕಲ್ಯಾಣಪರ್ವ ಕಾರ್ಯಕ್ರಮ ಜರು ಗಲಿದೆ’ ಎಂದು ಬೆಂಗಳೂರಿನ ಚನ್ನಬಸ ವಾನಂದ ಸ್ವಾಮೀಜಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮ ಸರಳವಾಗಿ ಕೋವಿಡ್ ನಿಯಮಗಳ ಪ್ರಕಾರ ನಡೆಯುವುದು. ಪ್ರತಿ ವರ್ಷದಂತೆ ಕೊನೆಯ ದಿನ ನಗರದಲ್ಲಿ ಮೆರವಣಿಗೆ ಇರುವುದಿಲ್ಲ. 30ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಉದ್ಘಾಟಿಸುವರು. ಸಿದ್ಧರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಅತಿಥಿಗಳಾಗಿ ಆಗಮಿಸುವರು. ಶಿವಶರಣಪ್ಪ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ ಧನ್ನೂರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಲಾ ಬಿ.ನಾರಾಯಣರಾವ್ ಉಪಸ್ಥಿತರಿರುವರು’ ಎಂದು ಮಾಹಿತಿ ನೀಡಿದರು.
‘ಅಂದು ಸಂಜೆ 5 ಗಂಟೆಗೆ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಅಧಿವೇಶನ ನಡೆಯುವುದು. 31ರಂದು ಬೆಳಿಗ್ಗೆ ಶರಣ ವಂದನೆ 10.30ಕ್ಕೆ ಧರ್ಮಚಿಂತನಗೋಷ್ಠಿ ಆಯೋಜಿಸಲಾಗುತ್ತದೆ. 12.30 ಗಂಟೆಗೆ ಶೂನ್ಯ ಪೀಠಾರೋಹಣದ ವಾರ್ಷಿಕೋತ್ಸವ ಜರುಗುವುದು. ವಚನಗಾಯನ, ವಚನ ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 60 ವರ್ಷ ಮೇಲ್ಪಟ್ಟವರಿಗೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ’ ಎಂದು ತಿಳಿಸಿದರು.
ಬಸವಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ, ದಾಸೋಹ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.