ಔರಾದ್ ತಾಲ್ಲೂಕು ಆಡಳಿತ ಆಯೋಜಿಸಿದ ಗಣರಾಜ್ಯೋತ್ಸವದಲ್ಲಿ ಶಾಸಕ ಪ್ರಭು ಚವಾಣ್ ಮಾತನಾಡಿದರು
ಔರಾದ್: ಈ ಗಡಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕಾರ್ಖಾನೆ ಸ್ಥಾಪಿಸುವಂತೆ ಜನರ ದಶಕಗಳ ಬೇಡಿಕೆಗೆ ಪೂರಕವಾಗಿ ಕ್ಷೇತ್ರದಲ್ಲಿ ₹2147 ಕೋಟಿ ವೆಚ್ಚದಲ್ಲಿ ಪವರ್ ಟ್ರಾನ್ಸ್ಮಿಷನ್ ಕೇಂದ್ರದ ಕಾಮಗಾರಿ ಆರಂಭವಾಗಿದೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
ತಾಲ್ಲೂಕು ಆಡಳಿತ ಭಾನುವಾರ ಇಲ್ಲಿ ಆಯೋಜಿಸಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಮಲನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಚಿಮೆಗಾಂವ್ ಹಾಗೂ ಮಾಳೆಗಾಂವ್ 163 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೋರೇಷನ್ನಿಂದ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣ ಆದರೆ ಇಲ್ಲಿ ಸಾಕಷ್ಟು ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಿದರು.
ಈ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಈ ಜನರ ಋಣ ತೀರಿಸುವುದು ನನ್ನ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ನಾನು ಮಂಜೂರು ಮಾಡಿಸಿದ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕಾರಂಜಾದಿಂದ ಔರಾದ್ಗೆ ನೀರು ತರುವ ₹84 ಕೋಟಿ ಯೋಜನೆ ಟೆಂಡರ್ ಆದರೂ ಕಾಮಗಾರಿ ಶುರುವಾಗಿಲ್ಲ. ಇಲ್ಲಿಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 36 ಕೆರೆ ತುಂಬಿಸುವ ₹560 ಕೋಟಿ ಯೋಜನೆಗೆ ಮಂಜೂರಾತಿ ಪಡೆದು ಎರಡು ವರ್ಷವಾದರೂ ಕಾಮಗಾರಿ ಆರಂಭವಾಗದಿರುವುದು ಈ ಸರ್ಕಾರದ ಅಭಿವೃದ್ಧಿ ವಿರೋಧ ಕ್ರಮವಾಗಿದೆ ಎಂದು ದೂರಿದರು.
ಶಿಕ್ಷಕ ದತ್ತಾತ್ರಿ ಗಿರಿ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನ ಸಮಸ್ತ ಭಾರತೀಯರ ಹೆಮ್ಮೆ. ಇಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲ ಹಕ್ಕು ಪಡೆಯುವ ಅವಕಾಶವಿದೆ ಎಂದು ಹೇಳಿದರು.
ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಮುಖ್ಯಾಧಿಕಾರಿ ಸ್ವಾಮಿದಾಸ, ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ತಾಲ್ಲೂಕು ಖಜಾನೆ ಅಧಿಕಾರಿ ಮಾಣಿಕ ನೇಳಗೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಗಣ್ಯರು ಇದ್ದರು.
ಕೈಕೊಟ್ಟ ಮೈಕ್: ಭಾಷಣಕ್ಕೆ ಅಡ್ಡಿ: ತಾಲ್ಲೂಕು ಆಡಳಿತ ಭಾನುವಾರ ಆಯೋಜಿಸಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೈಕ್ ಕೈಕೊಟ್ಟು ಉಪನ್ಯಾಸಕರ ಭಾಷಣಕ್ಕೆ ಅಡ್ಡಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.