ADVERTISEMENT

ಸದ್ಯ ಬಿಜೆಪಿ ಬಿಡಲ್ಲ: ಸಿದ್ರಾಮ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 12:34 IST
Last Updated 4 ಜನವರಿ 2018, 12:34 IST

ಬೀದರ್: ಜೆಡಿಎಸ್‌ ಮುಖಂಡರು ನನಗೆ ಕರೆ ಮಾಡಿದ್ದು ನಿಜ. ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆ ನಂತರ ನನ್ನ ರಾಜಕೀಯ ಭವಿಷ್ಯದ ಬಗೆಗೆ ಅಂತಿಮ ತೀರ್ಮಾನ ಕೈಗೊಳ್ಳುವೆ. ಅಲ್ಲಿಯ ವರೆಗೆ ಬಿಜೆಪಿಯಲ್ಲೇ ಇರುವೆ ಎಂದು ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಹೇಳಿದರು.

ದಿ. ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟು ಕೆಜೆಪಿಯಿಂದ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ಜಿಲ್ಲೆಗೆ ಬಂದಿದ್ದ ವೇಳೆಯಲ್ಲಿ ಪ್ರಕಾಶ ಖಂಡ್ರೆ ಅವರನ್ನು ಭಾಲ್ಕಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಕ್ಕೆ ನೊಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೆ. ಅವರು ನನ್ನನ್ನು ಐಬಿಯಲ್ಲಿ ಕರೆದು ಒಂದು ಒಳ್ಳೆಯ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಅವರ ವಿರುದ್ಧ ಆವೇಶದಿಂದ ಮಾತನಾಡಿದ್ದಕ್ಕಾಗಿ ಕ್ಷಮೆ ಯಾಚಿಸುವೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪ್ರಕಾಶ ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಮತಗಳ ಅಂತರದಿಂದ ಹಾಗೂ ಬೀದರ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 27 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಖಂಡ್ರೆಹಟಾವೋ, ಭಾಲ್ಕಿ ಬಚಾವೋ ಅಭಿಯಾನಕ್ಕೆ ಬೆಂಬಲ ನೀಡಿ ನನಗೆ 48 ಸಾವಿರ ಜನ ಮತ ನೀಡಿದ್ದರು. ಹೀಗಾಗಿ ನಾನು ಭಾಲ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು.

ADVERTISEMENT

ಮರಾಠರನ್ನು ಹತ್ತಿಕ್ಕುವ ಯತ್ನ: ಹುಲಸೂರು ತಾಲ್ಲೂಕಿಗೆ ಸಾಯಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ 22 ಗ್ರಾಮಗಳನ್ನು ಸೇರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಜಿಲ್ಲಾ ಉಸ್ತುವಾರಿ ಸಚಿವರು ಅದಕ್ಕೆ ತಡೆ ಒಡ್ಡುತ್ತಿದ್ದಾರೆ. ಸಾಯಗಾಂವ್‌ ಕ್ಷೇತ್ರದಲ್ಲಿ ಆರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಈ ಕ್ಷೇತ್ರದಲ್ಲಿ ಒಂದೂ ತೊಗರಿ ಖರೀದಿ ಕೇಂದ್ರ ಆರಂಭಿಸಿಲ್ಲ. ಮರಾಠ ಸಮುದಾಯ ಆರ್ಥಿಕವಾಗಿ ಸದೃಢಗೊಳ್ಳದಂತೆ ಈ ರೀತಿ ಮಾಡಲಾ ಗುತ್ತಿದೆ ಎಂದು ಆರೋಪ ಮಾಡಿದರು.

ಕೊನೆಯ ಹಂತದಲ್ಲಿ ನನಗೆ ಟಿಕೆಟ್‌ ಕೊಡದಿದ್ದರೂ ಚಿಂತೆ ಇಲ್ಲ. ಮರಾಠ ಸಮುದಾಯದ ಮುಖಂಡರಿಗೆ ಬಿಜೆಪಿ ಟಿಕೆಟ್‌ ಕೊಡ ಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ದಿಂದಾಗಿ ಜಿಲ್ಲೆಯಲ್ಲಿ ಶಾರದಾ ಕನ್‌ಸ್ಟ್ರಕ್ಷನ್ ಹಾಗೂ ಸೂರ್ಯಕಾಂತ ಅಲ್ಮಾಜೆ ಅವರಿಗೆ ಮಾತ್ರ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ನೀಡಲಾಗುತ್ತಿದೆ. ಇನ್ನುಳಿದ ಗುತ್ತಿಗೆದಾರರನ್ನು ಹತ್ತಿ ಕ್ಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಮೂಲಕ ರಾಜಕೀಯಕ್ಕೆ ಬಂದ ಖಂಡ್ರೆ ಕುಟುಂಬದವರೇ ಇದೀಗ ಕಾರ್ಖಾನೆಯನ್ನು ಕಡೆಗಣಿಸುತ್ತಿದ್ದಾರೆ. ಕಬ್ಬು ಪೂರೈಕೆ ಮಾಡಿದ ರೈತರಿಗೆ ನ್ಯಾಯಯುತವಾದ ಬೆಲೆ ಕೊಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಪಾದಿಸಿದರು.

ಪ್ರತಿ ಟನ್‌ ಕಬ್ಬಿಗೆ ರೈತರಿಂದ ಎರಡು ರೂಪಾಯಿ ಪಡೆದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಈಗ ಅವರಿಗೆ ಬಿಎಸ್‌ಎಸ್‌ಕೆಗೆ ₹ 10 ಕೋಟಿ ಬಿಡುಗಡೆ ಮಾಡಿಸಲು ಸಾಧ್ಯವಾಗುತ್ತಿಲ್ಲ. 1.75 ಲಕ್ಷ ಟನ್ ಕಬ್ಬು ನುರಿಕೆ ಮಾಡಬೇಕಿದ್ದ ಕಾರ್ಖಾನೆ ಈವರೆಗೆ ಕೇವಲ 11 ಸಾವಿರ ಟನ್‌ ಕಬ್ಬು ನುರಿಸಿದೆ. ಕಾರ್ಖಾನೆ ಕಾರ್ಮಿಕರಿಗೆ ಒಂದು ವರ್ಷದಿಂದ ಸಂಬಳ ಕೊಟ್ಟಿಲ್ಲ. ಕಾರ್ಖಾನೆಯ ದುಃಸ್ಥಿತಿಗೆ ಉಸ್ತುವಾರಿ ಸಚಿವರೇ ಕಾರಣ’ ಎಂದರು.

ಪ್ರತಿ ಟನ್‌ ಕಬ್ಬಿಗೆ ಕಾರ್ಖಾನೆಗಳು ಕೇವಲ ₹ 1,900 ಕೊಡುತ್ತಿವೆ. ಕನಿಷ್ಠ ₹ 2,200 ದರ ಕೊಡಬೇಕು ಎಂದರು.

ಶಿವಾಜಿರಾವ್ ಭೋಸಲೆ, ಶಾಂತವೀರ ಕೇಸಕರ್, ಪ್ರತಾಪ ಪಾಟೀಲ, ಸುರೇಶ ಕಾನೇಕರ್, ಚಂದ್ರಕಾಂತ ಪಾಟೀಲ, ಶರಣಪ್ಪ ಕಡಗಂಜೆ, ರಾಮರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.