ಭಾಲ್ಕಿ: ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ ₹ 2200 ಮುಂಗಡ ಹಣ ಪಾವತಿ ಮಾಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ, ತಾಲ್ಲೂಕು ಘಟಕದ ಪ್ರಮುಖರು ಸೋಮವಾರ ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನೆಯ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘ, ಹಸಿರು ಸೇನೆ ಪ್ರಮುಖರು ಮಾತನಾಡಿ, ಪ್ರತಿ ಟನ್ ಕಬ್ಬಿಗೆ ₹ 2200 ನಿಗದಿ ಪಡಿಸಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ₹10 ಕೋಟಿ ಖಾತ್ರಿ ಸಾಲ ಕೂಡಲೇ ಬಿಡುಗಡೆ ಮಾಡಬೇಕು. ತೊಗರಿ ಖರೀದಿ ಕೇಂದ್ರ ಮಾರ್ಚ್ ತಿಂಗಳಿನವರೆಗೆ ತೆರೆದಿಡಬೇಕು ಹಾಗೂ 1 ಲಕ್ಷ ಮೆಟ್ರಿಕ್ ಟನ್ ವರೆಗೆ ಜಿಲ್ಲೆಯ ರೈತರ ತೊಗರಿ ಖರೀದಿಗೆ ಒಪ್ಪಿಗೆ ನೀಡಬೇಕು. ಬಡ್ಡಿ ಮನ್ನಾ ಅವಧಿ ಮಾರ್ಚ್ ತಿಂಗಳಿನವರೆಗೆ ವಿಸ್ತರಿಸಬೇಕು. ರೈತರ ಪಂಪ್ ಸೆಟ್ಗಳಿಗೆ ಹಗಲಿನಲ್ಲಿ 8 ತಾಸು ವಿದ್ಯುತ್ ಕೊಡಬೇಕು. ರೈತರ ಮೇಲಿನ ಸುಳ್ಳು ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಚಿವ ಈಶ್ವರ ಖಂಡ್ರೆ ಅವರು ದೂರವಾಣಿ ಮೂಲಕ ರೈತ ಮುಖಂಡರೊಂದಿಗೆ ಮಾತನಾಡಿ, ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯದರ್ಶಿ ಬಾಬುರಾವ ಜೋಳದಾಪಕಾ, ಪ್ರಮುಖರಾದ ವೈಜಿನಾಥ ನೌಬಾದೆ, ಶಂಕ್ರೆಪ್ಪಾ ಪಾರಾ, ವಿಶ್ವನಾಥ ಚಿಲಶೆಟ್ಟೆ, ಶೇಷರಾವ ಕಣಜಿ, ಕೊಂಡಿಬಾ ಪಾಂಡ್ರೆ, ಶ್ರೀಮಂತ ಬಿರಾದಾರ್, ಶಿವಾನಂದ ಹುಡುಗಿ, ವೀರಶೆಟ್ಟಿ ಆಣದೂರ್, ಶಾಮಣ್ಣ ಬಾವಗಿ, ಚಂದ್ರಶೇಖರರಾವ್ ಜಮಖಂಡಿ, ಭವರಾವ ಪಾಟೀಲ, ಖಾನಸಾಬ್, ಸುಭಾಷ ರಗಟೆ, ಸಿದ್ರಾಮಪ್ಪ ನಾರಾಯಣಪೂರ, ಬಾಬುರಾವ ಸೋನಜೀ, ಖಾಸೀಂಅಲಿ ಹುಮನಾಬಾದ್, ಈರಪಣ್ಣ ದುಬಲಗುಂಡಿ, ಶಂಕರರಾವ ದಾಡಗೆ, ತಿಪ್ಪಣ್ಣ ಕಣಜೆ, ಲಕ್ಷ್ಮಣ ಜೋಳದಾಪಕಾ, ಮನೋಹರರಾವ ಹೊರಂಡಿ,
ಶರಣಪ್ಪ ಕಂದಗೂಳ, ಮಹಿಳಾಘಟಕದ ಅಧ್ಯಕ್ಷೆ ಶೋಭಾದೇವಿ ಕಾರಬಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.