ADVERTISEMENT

ತೊಗರಿ ವಿತರಣೆಗೆ 6 ಗ್ರಾಮ ಆಯ್ಕೆ: ಶಾಸಕ ಶರಣು ಸಲಗರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 5:18 IST
Last Updated 21 ಜೂನ್ 2021, 5:18 IST
ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿಯಲ್ಲಿ ಶಾಸಕ ಶರಣು ಸಲಗರ ಭಾನುವಾರ ಉಚಿತವಾಗಿ ತೊಗರಿ ಬಿತ್ತನೆ ಬೀಜಗಳನ್ನು ವಿತರಿಸಿದರು. ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿಯಲ್ಲಿ ಶಾಸಕ ಶರಣು ಸಲಗರ ಭಾನುವಾರ ಉಚಿತವಾಗಿ ತೊಗರಿ ಬಿತ್ತನೆ ಬೀಜಗಳನ್ನು ವಿತರಿಸಿದರು. ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ಇದ್ದರು   

ಬಸವಕಲ್ಯಾಣ: ‘ತೊಗರಿ ಬಿತ್ತನೆ ಬೀಜ ಉಚಿತವಾಗಿ ವಿತರಿಸಲು ಲಾಡವಂತಿ, ಘೋಟಾಳ, ಆಲಗೂಡ, ಮುಚಳಂಬ, ಪ್ರತಾಪುರ, ಹಿರೇನಾಗಾಂವ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 4 ಕೆ.ಜಿ.ಯ ಪಾಕೇಟ್‌ಗಳನ್ನು ಪ್ರತಿ ಗ್ರಾಮದ 400 ರೈತರಿಗೆ ವಿತರಿಸಲಾಗುತ್ತದೆ’ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲ್ಲೂಕಿನ ಲಾಡವಂತಿಯಲ್ಲಿ ಕೃಷಿ ಇಲಾಖೆಯಿಂದ ಭಾನುವಾರ ನಡೆದ ಉಚಿತ ತೊಗರಿ ಬಿತ್ತನೆ ಬೀಜ ವಿತರಣೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿ.ಆರ್.ಜಿ-811 ತಳಿಯ ತೊಗರಿ ಬೀಜವನ್ನು ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ನೀಡಲಾಗುತ್ತಿದೆ. ಇವುಗಳ ಬಿತ್ತನೆ ಕೈಗೊಂಡು ಹೆಚ್ಚಿನ ಇಳುವರಿ ಪಡೆಯಬೇಕು’ ಎಂದರು.

ADVERTISEMENT

ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ಮಾತನಾಡಿ, ‘ಈ ಹೊಸ ತಳಿ ಈಚೆಗೆ ಅಭಿವೃದ್ಧಿ ಪಡಿಸಿದ್ದು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದೆ. ಹೀಗಾಗಿ ಗೊಡ್ಡುರೋಗ, ನಟೆ, ಸೊರಬು ರೋಗ ಬರುವುದಿಲ್ಲ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ ಕಾಂಬಳೆ, ಉಪಾಧ್ಯಕ್ಷ ರೋಹಿದಾಸ ಬಿರಾದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸ, ಮುಖಂಡ ರತಿಕಾಂತ ಕೊಹಿನೂರ, ವಿಲಾಸ ತರಮೂಡೆ, ವೈಜನಾಥ ಭೂಸಾರೆ, ಸಂಭಾಜಿ ಶಿಂಧೆ, ಹರಿಬಾ ಜಮಾದಾರ, ದಾದಾರಾವ್ ವಾಡಿಕರ್, ಸಂಜೀವ ಭೂಸಾರೆ, ತಾನಾಜಿ ಮುಕಿಂದೆ, ಸಂಭಾಜಿ ನಾಟಿಕಾರ್ ಪಾಲ್ಗೊಂಡಿದ್ದರು.

ಆಹಾರಧಾನ್ಯ ವಿತರಣೆ: ತಾಲ್ಲೂಕಿನ ಲಾಡವಂತಿಯಲ್ಲಿ ಭಾನುವಾರ ಶಾಸಕ ಶರಣು ಸಲಗರ ಆಹಾರಧಾನ್ಯದ ಕಿಟ್ ವಿತರಿಸಿದರು.

ಮನೆ ನಿರ್ಮಿಸಲು ಅನುದಾನ

ಬಸವಕಲ್ಯಾಣ: ತಾಲ್ಲೂಕಿನ ಲಾಡವಂತಿ ವಾಡಿಯಲ್ಲಿ ಭಾನುವಾರ ಶಾಸಕ ಶರಣು ಸಲಗರ ಸ್ವಂತ ಖರ್ಚಿನಿಂದ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಿದರು.

ನಂತರ ಮಾತನಾಡಿ, ‘ಉಪ ಚುನಾವಣೆಯಲ್ಲಿ 71 ಸಾವಿರ ಮತ ನೀಡಿ ಗೆಲ್ಲಿಸಿದ ಋಣ ತೀರಿಸಲಾಗದು. ತಗಡಿನ ಮನೆ ಇದ್ದವರಿಗೆ ಮನೆ ನಿರ್ಮಿಸಲು ಅನುದಾನ ನೀಡಲಾಗುತ್ತದೆ. ಅಗತ್ಯವಿದ್ದವರಿಗೆ ಅಡುಗೆ ಅನಿಲದ ವ್ಯವಸ್ಥೆಯೂ ಮಾಡಲಾಗುತ್ತದೆ. ಗ್ರಾಮದ ದೇವಸ್ಥಾನದ ಛಾವಣಿ ಹಾಗೂ ಹಾಸುಗಲ್ಲು ಹಾಕುವ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.

ಗದ್ಲೇಗಾಂವ (ಕೆ), ಗದ್ಲೇಗಾಂವ (ಕೆ) ತಾಂಡಾದಲ್ಲೂ ಆಹಾರಧಾನ್ಯ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.