ADVERTISEMENT

‘ಕೋಮು ಸೌಹಾರ್ದ ರಾಷ್ಟ್ರದ ವೈಶಿಷ್ಟ್ಯ’

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 15:14 IST
Last Updated 19 ನವೆಂಬರ್ 2022, 15:14 IST
ಬೀದರ್‌ನ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಕೋಮು ಸೌಹಾರ್ದ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು
ಬೀದರ್‌ನ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಕೋಮು ಸೌಹಾರ್ದ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು   

ಬೀದರ್‌: ‘ಕೋಮು ಸೌಹಾರ್ದ ನಮ್ಮ ರಾಷ್ಟ್ರದ ವೈಶಿಷ್ಟ್ಯವಾಗಿದೆ. ನಾವೆಲ್ಲ ಸೌಹಾರ್ದದಿಂದ ಬಾಳಿದಾಗ ಮಾತ್ರ ರಾಷ್ಟ್ರ ಸದೃಢವಾಗಿರಲು ಸಾಧ್ಯವಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಇದಾರಾ ಅದಬ್ ಎ ಇಸ್ಲಾಮಿ ಬೀದರ್ ವತಿಯಿಂದ ಕೋಮು ಸೌಹಾರ್ದ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇದಾರಾ ಅದಬ್ ಏ ಇಸ್ಲಾಮಿ ಹಾಗೂ ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರು ಕೋಮು ಸೌಹಾರ್ದ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕವೇ ಸಮುದಾಯಗಳ ನಡುವಿನ ಬಾಂಧವ್ಯ ಗೊಟ್ಟಿಗೊಳಿಸಲು ಪ್ರಯತ್ನಿಸುತ್ತಿರುವುದು ಪ್ರಶಂಸನೀಯವಾಗಿದೆ’ ಎಂದು ಹೇಳಿದರು.

ADVERTISEMENT

‘ಇಂತಹ ಕಾರ್ಯಕ್ರಮಗಳು ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿವೆ. ಬೀದರ್ ಉತ್ಸವದಲ್ಲಿ ಇದೇ ಮಾದರಿಯ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಅಬ್ದುಲ್ ಖದೀರ್ ಮಾತನಾಡಿ, ನಾವೆಲ್ಲಾ ಕೋಮು ಸೌಹಾರ್ದದಿಂದ ಬಾಳಿದರೆ ಭಾರತ ವಿಶ್ವಗುರು ಆಗಲಿದೆ’ ಎಂದು ಹೇಳಿದರು.

ಉತ್ತರಪ್ರದೇಶದ ಕವಿ ನವಾಜ್ ದೇವಬಂದಿ, ವಸೀಮ್ ರಾಜುಪುರಿ ಹಾಗೂ ಮಹಾರಾಷ್ಟ್ರದ ಅಮರಾವತಿಯ ನಯೀಮ್ ಫರಾಜ್ ತಮ್ಮ ಕವನಗಳ ಮೂಲಕ ಜನರಿಗೆ ಮನರಂಜನೆ ನೀಡಿದರು.
ಕನ್ನಡದಲ್ಲಿ ಎಂ.ಜಿ. ದೇಶಪಾಂಡೆ, ರಾಮಚಂದ್ರ ಗಣಾಪೂರ, ಹಣಮಂತಪ್ಪ ವಲ್ಲೇಪೂರೆ, ಶಂಭುಲಿಂಗ ವಾಲದೊಡ್ಡಿ, ಪ್ರಭು ಪಾಟೀಲ, ಉರ್ದುವಿನಲ್ಲಿ ಸೈಯದ್ ಖಾಸಿಮ್ ಸಾಜಿದ್, ಖಾಜಿ ಇದ್ರೀಸ್ ಅಲಿ ಸಹರ್, ಸೈಫುದ್ದೀನ್ ಗೌರಿ ಸೈಫ್, ಶಕೀಲ್ ಜಹಿರಾಬಾದಿ, ಮುನವ್ವರ ಅಲಿ ಶಾಹೀದ್, ಕಮಾಲುದ್ದೀನ್ ಷಮೀಮ್, ಹಾಮೆದ್ ಸಲೀಮ್, ಸೈಯ್ಯದ ಜಮೀಲ್ ಅಹ್ಮದ್ ಹಾಶ್ಮಿ ಹಾಗೂ ಹಿಂದಿಯಲ್ಲಿ ಅಜೀಮ್ ಬಾದಶಾ ಕವನ ವಾಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಮಾಅತೆ ಇಸ್ಲಾಮಿ ಹಿಂದ್‌ನ ಬೀದರ್‌ ಘಟಕದ ಅಧ್ಯಕ್ಷ ಸೈಯದ್ ಅಬ್ದುಲ್ ಸತ್ತಾರ್, ಮುಖಂಡರಾದ ಮನ್ನಾನ್ ಸೇಠ್ ಇದ್ದರು.
ಕವಿಗೋಷ್ಠಿ ಮಹಮ್ಮದ್ ತಾಹಾ ಕಲಿಮುಲ್ಲಾ ಅವರು ಕುರ್‌ಆನ್ ಪಠಣದ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದರು. ಅಸ್ಲಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.