ADVERTISEMENT

ಮಾನಸಿಕ ಅಸ್ವಸ್ಥ ಮಹಿಳೆ ಡಿಮಾನ್ಸ್‌ಗೆ ದಾಖಲು

ಮಹಿಳೆಗೆ ವಾಹನದ ವ್ಯವಸ್ಥೆ ಮಾಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 13:44 IST
Last Updated 19 ಏಪ್ರಿಲ್ 2021, 13:44 IST
ಬೀದರ್‌ನ ನ್ಯೂ ಆದರ್ಶ ಕಾಲೊನಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಧಾರವಾಡದ ಡಿಮಾನ್ಸ್‌ಗೆ ಕಳಿಸಲಾಗಿದೆ
ಬೀದರ್‌ನ ನ್ಯೂ ಆದರ್ಶ ಕಾಲೊನಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಧಾರವಾಡದ ಡಿಮಾನ್ಸ್‌ಗೆ ಕಳಿಸಲಾಗಿದೆ   

ಬೀದರ್‌: ನಗರದ ನ್ಯೂಆದರ್ಶ ಕಾಲೊನಿಯಲ್ಲಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಗುರುತಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಮಹಿಳೆಗೆ ನಗರದ ಬ್ರಿಮ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಧಾರವಾಡದ ಡಿಮಾನ್ಸ್‌ಗೆ ಕಳಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಏ.17ರಂದು ಜಿಲ್ಲಾಧಿಕಾರಿ ಕಾರಿನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಬಿಸಿಲಲ್ಲಿ ಅಲೆಯುತ್ತಿದ್ದ ಮಹಿಳೆಯನ್ನು ಗಮನಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶಂಭುಲಿಂಗ ಹಿರೇಮಠ ಅವರಿಗೆ ಮಾಹಿತಿ ನೀಡಿದ್ದಾರೆ.

ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣ ಅಧಿಕಾರಿ ಶಾರದಾ, ಜಿಲ್ಲಾ ಸಂಯೋಜಕಿ ಗೀತಾಂಜಲಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪೂರೆ ಸ್ಥಳಕ್ಕೆ ತೆರಳಿ ಮಹಿಳೆಯನ್ನು ನಗರದ ಬಸವ ಕಾರ್ಯ ಸಮಿತಿ ಸ್ವಧಾರ ಗೃಹಕ್ಕೆ ಕರೆ ತಂದು ಉಪಚರಿಸಿದರು. ನಂತರ ಹೊಸ ಬಟ್ಟೆ ಕೊಡಿಸಿ, ಊಟೋಪಚಾರ ಮಾಡಿಸಿ ಬ್ರಿಮ್ಸ್‌ನ ಆಸ್ಪತ್ರೆಗೆ ಕರೆ ತಂದರು.

ADVERTISEMENT

ಬ್ರಿಮ್ಸ್‌ನ ಮನೋರೋಗ ತಜ್ಞರು ಆರೋಗ್ಯ ತಪಾಸಣೆ ನಡೆಸಿ ಮಹಿಳೆಗೆ ದೀರ್ಘಾವಧಿಯ ಮಾನಸಿಕ ಆರೈಕೆ ಅಗತ್ಯವಿದೆ ಎಂದು ತಿಳಿಸಿದ ನಂತರ ಕೋವಿಡ್‌ ಪರೀಕ್ಷೆ ಮಾಡಿಸಿ ವರದಿ ನೆಗೆಟಿವ್‌ ಬಂದ ನಂತರ ಪೊಲೀಸ್‌ ಬೆಂಗಾವಲಿನಲ್ಲಿ ಧಾರವಾಡದ ಮಾನಸಿಕ ಆರೋಗ್ಯ ಚಿಕಿತ್ಸಾ ಕೇಂದ್ರಕ್ಕೆ ಕಳಿಸಿಕೊಡಲಾಯಿತು.

ಮಹಿಳೆಯನ್ನು ಧಾರವಾಡಕ್ಕೆ ಒಯ್ಯಲು ಜಿಲ್ಲಾಧಿಕಾರಿ ಅವರೇ ವ್ಯವಸ್ಥೆ ಮಾಡಿದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.