ಬೀದರ್: ‘ನೀರು ಹಾಗೂ ಜಮೀನು ಇರುವ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಂದಲೇ ನರ್ಸರಿಗಳನ್ನು ಆರಂಭಿಸಿ ಸ್ಥಳೀಯವಾಗಿ ಸಸಿಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಹಣಾಧಿಕಾರಿ ಜಹೀರಾ ನಸೀಮ್ ಹೇಳಿದರು.
ನಗರದ ಹೊರವಲಯದಲ್ಲಿರುವ ಅರಣ್ಯ ಇಲಾಖೆಯ ದೇವದೇವ ವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಪರಿಸರ ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಗೆ ಮರಗಿಡಗಳನ್ನು ಬೆಳೆಸಬೇಕು’ ಎಂದರು.
‘ರೈತರ ಹೊಲಗಳ ಬದು, ಗ್ರಾಮದ ರಸ್ತೆ ಬದಿ, ಸಮುದಾಯ ಕಟ್ಟಡ, ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆ ಆವರಣಗಳಲ್ಲಿ ಸಸಿಗಳನ್ನು ನೆಡಬೇಕು’ ಎಂದು ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದಕ್ಕೂ ಮೊದಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬೆಳೆಸಲಾದ ಶ್ರೀಗಂಧ, ಬೇವು, ಹೆಬ್ಬೇವು, ಮಾವು, ನಿಂಬೆ, ಸಿಲ್ವರ್ ಓಕ್ ಹಾಗೂ ವಿವಿಧ ಸಸಿಗಳ ಮಾಹಿತಿ ಪಡೆದರು.
ಬೀದರ್ ತಾಲ್ಲೂಕಿನಲ್ಲಿ 1.50 ಲಕ್ಷ ಶ್ರೀಗಂಧ ಹಾಗೂ 21 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. ಇಡೀ ಜಿಲ್ಲೆಯಲ್ಲಿ 7.5 ಲಕ್ಷ ಶ್ರೀಗಂಧ ಹಾಗೂ 61 ಸಾವಿರ ವಿವಿಧ ಸಸಿಗಳನ್ನು ಬೆಳೆಸಲಾಗಿದೆ ಎಂದು ಬೀದರ್ ಸಾಮಾಜಿಕ ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ಶಿವಕುಮಾರ ರಾಠೋಡ್ ತಿಳಿಸಿದರು.
ಕೆ.ಎ.ಎಸ್ ಪ್ರೊಬೇಷನರಿ ಅಧಿಕಾರಿಗಳಾದ ಆಶ್ವಿನ್, ವೆಂಕಟಲಕ್ಷ್ಮಿ ಹಾಗೂ ಬೀದರ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಾಲಾಜಿ, ನಾಸೀರ್, ನರಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.