ಬೀದರ್: ಸೋಯಾ ಅವರೆ ಬೆಳೆಯ ಎಲೆ ತಿನ್ನುವ ಕೀಟ ಬಾಧೆ ತೀವ್ರವಾಗುತ್ತಿದ್ದು, ಕೀಟ ನಿರ್ವಹಣೆಗೆ ರೈತರು ಮುಂದಾಗಬೇಕು. ಕೆಲವು ಸಲಹೆಗಳನ್ನು ಪಾಲಿಸಬೇಕು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಕೀಟ ನಿರ್ವಹಣೆಗೆ ಕೆಳಗಿನ ಕೀಟನಾಶಕಗಳಲ್ಲಿ ಯಾವುದಾದರೂ ಒಂದನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 2.0 ಮಿ.ಲೀ. ಕ್ವಿನಾಲ್ಫಾಸ್ 25 ಇಸಿ, 2.0 ಮಿ.ಲೀ. ಕ್ಲೊರೊಪೈರಿಫಾಸ್ 20 ಇಸಿ, 0.5 ಮಿ.ಲೀ. ಫ್ಲೂಬೆಂಡಿಮೈಡ್ ಶೇ 20 ಡಬ್ಲ್ಯೂಜಿ, ಜೈವಿಕ ಆಯ್ಕೆಗಳಲ್ಲಿ 1.0 ಮಿ.ಲೀ. ಬಿ.ಟಿ. ದುಂಡಾಣು ಅಥವಾ 2.0 ಗ್ರಾಂ. ನೊವೊರಿಯಾ ರಿಲೈ ಶಿಲೀಂಧ್ರ ಬಳಸಬಹುದು ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸೋಯಾ ಅವರೆ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದು. ಪ್ರತಿ ವರ್ಷ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಮೇ ತಿಂಗಳ ಅಂತ್ಯದಿಂದಲೇ ಮೊದಲ ಮಳೆಯಾದ ಪ್ರದೇಶಗಳಲ್ಲಿ ರೈತರು ಸೋಯಾ ಅವರೆ ಬಿತ್ತನೆ ಕಾರ್ಯ ಆರಂಭಿಸಿದ್ದರು. ಈಗಾಗಲೇ ಬೆಳೆ 30 ರಿಂದ 40 ದಿನಗಳ ಹಂತದಲ್ಲಿದೆ. ಆದರೆ, ಈ ಬೆಳೆಗೆ ಎಲೆ ತಿನ್ನುವ ಕೀಟದ ಬಾಧೆ ತೀವ್ರವಾಗುತ್ತಿದೆ. ಇತ್ತೀಚೆಗೆ ಹುಮನಾಬಾದ್ ತಾಲ್ಲೂಕಿನ ಹಣಕುಣಿ ಗ್ರಾಮಕ್ಕೆ ಭೇಟಿ ನೀಡಿದಾಗ ಇದು ಗಮನಕ್ಕೆ ಬಂದಿದೆ. ರೈತರು ಮೇಲಿನ ಸಲಹೆ ಪಾಲಿಸಿ, ಬೆಳೆ ರಕ್ಷಿಸಬೇಕು ಎಂದು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಉಮೇಶ ಬರಿಕರ ಮತ್ತು ಕೃಷಿ ಅಧಿಕಾರಿ ಮಕರ ಹರ್ಷ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.