ಭಾಲ್ಕಿ: ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ನಮ್ಮ ಭೂಮಾತೆಯನ್ನು ಸಂರಕ್ಷಿಸಲು ಸಾಧ್ಯ ಎಂದು ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಬಾಗಲಕೋಟೆಯ ಸ್ವಪ್ನಾ ಅನಿಗೋಳ ಹೇಳಿದರು.
ಪಟ್ಟಣದ ಸಂಸ್ಕಾರ ಪಬ್ಲಿಕ್ ಶಾಲೆಯ 2ನೇ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಹೆತ್ತವರು ಮಾಡುವ ಕಾರ್ಯದ ಅನುಕರಣೆ ಮಾಡುತ್ತಾರೆ. ಅದಕ್ಕಾಗಿ ನಾವು ಉತ್ತಮ ರೀತಿಯಲ್ಲಿ ಮಕ್ಕಳ ಸಮ್ಮುಖ ನಡೆದುಕೊಳ್ಳಬೇಕು. ನಾವು ಟಿ.ವಿ ನೋಡುತ್ತಿದ್ದರೆ ಮಕ್ಕಳು ಟಿ.ವಿ ನೋಡುವರು. ಹಾಗಾಗಿ ನಾವು ಮಕ್ಕಳ ಜೊತೆಯಲ್ಲಿ ಭಗವದ್ಗೀತೆ, ವಚನ ಸಂಪುಟಗಳಂತಹ ಪುಸ್ತಕಗಳನ್ನು ಓದಬೇಕು. ಅಂದಾಗ ಮಾತ್ರ ಅವರು ಕೂಡ ಓದಲು ಕಲಿಯುವರು’ ಎಂದು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಗಳನ್ನು ತೋರಿಸುತ್ತಾ ಸಭಿಕರ ಮನಮುಟ್ಟುಂತೆ ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ರುಮ್ಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದೇ ವಿವೇಕವಾಹಿನಿ ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಪ್ರತಿ ತಿಂಗಳು ಉತ್ತಮ ವಕ್ತಾರರನ್ನು ಸಂಸ್ಕಾರ ಪಬ್ಲಿಕ್ ಶಾಲೆಗೆ ಕರೆಸಿ ಮಕ್ಕಳಲ್ಲಿ ರಾಷ್ಟ್ರಪ್ರೇಮ ತುಂಬುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ವೇದಿಕೆಯ ಮೇಲಿದ್ದ ಎಲ್ಲರಿಗೂ ಕಾಟನ್ ಬಟ್ಟೆಯ ಕೈಚೀಲ ನೀಡಲಾಯಿತು.
ನಿರ್ಮಲಾ ಹಲಮಂಡಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮರ ಹಲಮಂಡಗೆ, ಬಾಗಲಕೋಟೆಯ ಶ್ರೀನಿವಾಸ ಪಾಟೀಲ, ಶಿವಲಿಂಗ ಅನಿಗೊಳ, ಶಿವಕುಮಾರ ಕೇರೂರ, ವಿಷ್ಣುಕೋಟೆ ಉಪಸ್ಥಿತರಿದ್ದರು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.