ಬೀದರ್: ದಲಿತರು ಎಚ್ಚರಗೊಳ್ಳದಿದ್ದರೆ ಸಂವಿಧಾನ ಹಾಗೂ ಮೀಸಲಾತಿಗೆ ಕತ್ತರಿ ಬೀಳಲಿದೆ ಎಂದು ಕರ್ನಾಟಕ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಅಧ್ಯಕ್ಷ ಬಿ. ಗೋಪಾಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ಬುಡಮೇಲು ಮಾಡುವ ಹಾಗೂ ದಲಿತರಿಗೆ ಸಂವಿಧಾನ ಬದ್ಧವಾಗಿ ನೀಡಲಾದ ಮೀಸಲಾತಿ ತೆಗೆದು ಹಾಕುವ ಹುನ್ನಾರ ನಡೆದಿದೆ. ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟಿರುವುದು ಹಾಗೂ ಅನೇಕ ಉನ್ನತ ಹುದ್ದೆಗಳಲ್ಲಿ ಮೀಸಲಾತಿ ತಡೆಗಟ್ಟಿರುವುದು ಇದಕ್ಕೆ ನಿದರ್ಶನ ಎಂದರು.
ಬೆಲ್ದಾಳ ಸಿದ್ಧರಾಮ ಶರಣರು ಸಾನಿಧ್ಯ ವಹಿಸಿದ್ದರು. ಸುರೇಶ ಟಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಭೀಮಸೇನೆ ರಾಷ್ಟ್ರೀಯ ಅಧ್ಯಕ್ಷ ತುಕಾರಾಮ ಎಂ. ಅಧ್ಯಕ್ಷತೆ ವಹಿಸಿದ್ದರು.
ಪಿಪಿಐ ರಾಷ್ಟ್ರೀಯ ಅಧ್ಯಕ್ಷ ಡಿ.ಬಿ. ಬೋರ್ಕರ್, ಸೇನಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ ಮಾಳಗೆ, ರಾಜ್ಯ ಘಟಕದ ಅಧ್ಯಕ್ಷ ಸುರೇಶ ಸಿಂಧೆ, ಜಿಲ್ಲಾ ಘಟಕದ ಅಧ್ಯಕ್ಷ ಬಕ್ಕಪ್ಪ ದಂಡಿನ್, ಪ್ರಮುಖರಾದ ಡಿ. ಶಿವಶಂಕರ, ವೈ. ವೆಂಕಯ್ಯ, ಕರುಣಾಕುಮಾರ, ಬಿ.ವಿ. ಮೇಶ್ರಾಮ್, ನಾಗೇಂದ್ರ ದಂಡೆ, ಸುನೀಲ್ ಡೋಳೆ ಇದ್ದರು.
ಭಾರತೀಯ ಭೀಮಸೇನಾ ಸಂಯೋಜಕ ಮಹಾದೇವ ಕಾಂಬಳೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.